ಉಡುಪಿ: ಯಾವುದೇ ವಿದ್ಯೆ ಕಲಿತು ಉದ್ಯೋಗ ಮಾಡುತ್ತಿದ್ದರೂ ಆಧ್ಯಾತ್ಮಿಕ ವಿದ್ಯೆಯಿಂದ ಸದಾಚಾರ ಮೂಲಕ ಸಜ್ಜನಿಕೆಯುಳ್ಳ ನಾಗರಿಕರಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ 15 ದಿನ ನಡೆದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಅಶೀರ್ವಚನ ನೀಡಿದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಮಾತನಾಡಿ, ಶಿಬಿರದಲ್ಲಿ ಕಲಿತ ವಿದ್ಯೆ ಯಾವತ್ತೂ ಅಚ್ಚಳಿಯದೆ ಉಳಿಯಬೇಕು. ಪ್ರತಿ ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಿ ಆತ್ಮೊದ್ಧಾರ ಚಿಂತನೆಗಳು ಮಕ್ಕಳಲ್ಲಿ ಬೆಳೆಯಬೇಕು ಎಂದು ಹರಸಿದರು.
ಪುತ್ತಿಗೆ ವಿದ್ಯಾಪಿಠ ಹಾಗು ಪುತ್ತಿಗೆ ಮಠದಲ್ಲಿ ನಡೆದ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ, ತಾವು ಕಲಿತ ವಿದ್ಯೆಗಳನ್ನು ಗುರುಗಳಿಗೆ ಒಪ್ಪಿಸಿದ್ದರು. ಶ್ರೀಗಳು ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿದರು.
ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ, ಪ್ರಮೋದ್ ಸಾಗರ್, ಮಹಿತೋಷ್ ಆಚಾರ್ಯ, ಯೋಗೀಂದ್ರ ಭಟ್ ಉಪಸ್ಥಿತರಿದ್ದರು. ರಮೇಶ್ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.