ಬೆಂಗಳೂರು:
ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸ್ಟಾರ್ ಪ್ರಚಾರಕರು ಮತ್ತು ಪ್ರಚಾರಕರು ಹಾಗೂ ಮುಖಂಡರುಗಳು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕಮಾರ್ ಅವರಿಂದ ಹಿಡಿದು ಮಂತ್ರಿ ಮಂಡಲದ ಅರ್ಧದಷ್ಟು ಸಚಿವರುಗಳು ಮತ್ತು ಚುನಾವಣಾ ಪ್ರಚಾರಕ್ಕೆ ನಿಯೋಜನೆಗೊಂಡಿದ್ದ ಶಾಸಕರು ಮತ್ತು ಪಕ್ಷದ ಮುಖಂಡರು ಹಿಂತಿರುಗಿದ್ದಾರೆ.
14 ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಶಾಸಕರು ಮತ್ತು ಸಚಿವರುಗಳು ಮಾತ್ರ ಮತದಾನ ಮಾಡುವ ಸಲುವಾಗಿ ಅಲ್ಲಿಯೇ ಉಳಿದಿದ್ದಾರೆ.
ಇನ್ನು ಬಿಜೆಪಿ ಪಕ್ಷದಲ್ಲಿಯೂ ಪ್ರಚಾರಕ್ಕೆ ತೆರಳಿದ್ದ ಪಕ್ಷದ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ವಾಪಸ್ಸಾಗಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳು ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿದ್ದು, ಮತದಾನ ಬಳಿಕ ವಾಪಸ್ಸಾಗಲಿದ್ದಾರೆ.
ಬಿಜೆಪಿ ಮಿತ್ರ ಪಕ್ಷವಾಗಿರುವ ಜೆಡಿಎಸ್ ನಾಯಕರುಗಳು ಕೆಲ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳಿ ವಾಪಸ್ಸಾಗಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೆಚ್ಚು ಕಡೆ ಪ್ರಚಾರದಲ್ಲ ಭಾಗವಹಿಸಿದ್ದರು. ಇನ್ನುಳಿದಂತೆ ಕೆಲ ಶಾಸಕರಿಗೆ ಕೆಲವು ಕಡೆಯಲ್ಲಿ ಹೋಗಿ ಬರಲು ಸೂಚನೆ ನೀಡಲಾಗಿತ್ತು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಚುನಾವಣಾ ಪ್ರಚಾರದಿಂದ ವಾಪಸ್ಸಾಗಿರುವ ಎಲ್ಲಾ ಮುಖಂಡರು ಒಂದೆರಡು ದಿನ ವಿಶ್ರಾಂತಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಕೆಲವರು ರಿಲ್ಯಾಕ್ಸ್ಗಾಗಿ ರೆಸಾರ್ಟ್, ಹೋಂ ಸ್ಟೇಗಳ ಕಡೆಗೆ ಮುಖ ಮಾಡಿದ್ದಾರೆ.