ಹೈದರಾಬಾದ್: ತೆಲಂಗಾಣದ ಮೂಲದ ಐಆರ್ಟಿಎಸ್ (ಭಾರತೀಯ ರೈಲ್ವೆ ಸಂಚಾರಿ ಸೇವೆ) ಅಧಿಕಾರಿಯೊಬ್ಬರು ತಮ್ಮ ವಿವಾಹಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಿರುವ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಧಿಕಾರಿ ಶಶಿಕಾಂತ್ ಕೊರವತ್ ಅವರ ವಿವಾಹ ಇದೇ ನವೆಂಬರ್ 28ಕ್ಕೆ ನಿಶ್ಚಯವಾಗಿದೆ. ಕೇವಲ ಲಗ್ನಪತ್ರಿಕೆ ಮಾತ್ರವಲ್ಲದೆ ಇಡೀ ಮದುವೆ ಸಮಾರಂಭವೇ ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರುಮಯವಾಗಿರಲಿದೆ. ಈ ಒಂದು ಮಾದರಿ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗಿದೆ.
ತಮ್ಮ ಉತ್ತಮ ಆಲೋಚನೆಗಳನ್ನು ನ್ಯೂಸ್ಮೀಟರ್ ವೆಬ್ಸೈಟ್ ಜತೆಗೆ ಶಶಿಕಾಂತ್ ಹಂಚಿಕೊಂಡಿದ್ದಾರೆ. ಪರಿಸರದಿಂದಲೇ ಸುತ್ತುವರಿದಿರುವ ತೆಲಂಗಾಣದ ಮೆಹಬೂಬ್ನಗರದಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ನಾನು ಹೋಗಿದ್ದೆ. ಅಂದೇ ನಾನು ಪ್ರಕೃತಿಯ ಪ್ರೀತಿಯಲ್ಲಿ ಬಿದ್ದಿದ್ದೆ. ಬಳಿಕ ಹಲವು ವರ್ಷಗಳವರೆಗೆ ಪ್ಲಾಸ್ಟಿಕ್ ಮಾಲಿನ್ಯ ಕುರಿತು ನಾನು ಸಂಶೋಧನೆಯನ್ನು ಮಾಡಿದ್ದೇನೆ. ಎಲ್ಲವನ್ನು ತಿಳಿದು ತುಂಬಾ ನೋವಾಯಿತು. ನಾನು ಗಾಂಧಿಯ ಪ್ರಬಲ ಅನುಯಾಯಿಯಾಗಿದ್ದು, “ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಿ” ಎಂಬ ಗಾಂಧಿಯ ಮಾತಂತೆ ನಡೆಯಲು ಆರಂಭಿಸಿದ್ದೇನೆ. ಮದುವೆ ಎಂಬುದು ಹೊಸ ಜೀವನದ ಆರಂಭ, ಹೀಗಾಗಿ ಹಸಿರಿನಿಂದಲೇ ಆರಂಭವಾಗಲಿ ಎಂದು ನಿರ್ಧರಿಸಿದ್ದೇನೆಂದು ಶಶಿಕಾಂತ್ ಹೇಳಿದ್ದಾರೆ.
ನವಜೋಡಿ ಶಶಿಕಾಂತ್ ಮತ್ತು ಸ್ವಪ್ನ ಅವರು ಆಗ್ರಾ ಮೂಲದ ಕಂಪನಿಯಿಂದ ಸುಮಾರು 100 ಪ್ಲ್ಯಾಂಟೇಬಲ್ (ನೆಡಲು ಯೋಗ್ಯವಾದ) ವೆಡ್ಡಿಂಗ್ ಕಾರ್ಡ್ಸ್ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಆಮಂತ್ರಣ ಪತ್ರಿಕೆಯನ್ನು ಬೀಸಾಡಿದಾಗ ಅವರು ಮಾಲಿನ್ಯಕಾರಕಗಳಾಗಿದ್ದು, ಹಸಿರು ಕ್ಷೀಣತೆಗೆ ಕಾರಣವಾಗುತ್ತವೆ. ಹೀಗಾಗಿ ಪರಿಸರಸ್ನೇಹಿ ವಿವಾಹ ಸಮಾರಂಭ ನಡೆಸಲು ಉತ್ಸುಕರಾಗಿದ್ದೇವೆ. ಪ್ಲಾಸ್ಟಿಕ್ ವಾಟರ್ ಕ್ಯಾನ್ ಹೊರತುಪಡಿಸಿ ಉಳಿದೆಲ್ಲವು ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಪ್ಲಾಸ್ಟಿಕ್ ವಾಟರ್ ಕ್ಯಾನ್ಗಳನ್ನು ಸಹ ಮರುಬಳಕೆ ಮಾಡಲು ಕಂಪನಿಯೊಂದಿಗೆ ಮಾತನಾಡಿದ್ದೇನೆ ಎಂದು ಶಶಿಕಾಂತ್ ತಿಳಿಸಿದರು.
ಹಸಿರು ಅತಿಥಿಗಳಿಗೆ ಸ್ವಾಗತ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದ್ದು, ಪತ್ರಿಕೆಯನ್ನು ಬೀಸಾಡಿದಾಗ ಅದು ಟೊಮ್ಯಾಟೋ, ಬೆಂಡೆಕಾಯಿ ಮತ್ತು ಮೆಣಸಿನಕಾಯಿ ಸಸಿಯಾಗಿ ಬೆಳೆಯಲಿದೆ. ಲಗ್ನ ಪತ್ರಿಕೆಯ ಹೊದಿಕೆಯನ್ನು ಬೀಸಾಡಿದರೆ ಅದು ಚಮಂತಿ ಮತ್ತು ಲಿಲ್ಲಿ ಸಸಿಯಾಗಿ ಬೆಳೆಯಲಿದೆ ಎಂಬ ಸಂದೇಶ ವಿವಾಹ ಪತ್ರಿಕೆ ಮೇಲಿದೆ. ಹೀಗಾಗಿ ಶಶಿಕಾಂತ್ ಅವರ ಆಮಂತ್ರಣ ಪತ್ರಿಕೆ ಇದೀಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್)
ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್ ಬಾಸ್ ನೋಡಿದ ರೋಗಿ; ಕಾರಣವೇನು ಗೊತ್ತಾ?