ರಾಣೆಬೆನ್ನೂರ: ಬ್ಯಾಡಗಿ ತಾಲೂಕಿನ ಆನೂರ ಕೆರೆಗೆ ನೀರು ತುಂಬಿಸುವ ಪೈಪ್ಲೈನ್ ಒಡೆದು ರೈತ ಬೆಳೆದ ಮೂರು ಎಕರೆ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾದ ಘಟನೆ ತಾಲೂಕಿನ ಬಿಲ್ಲಹಳ್ಳಿಯಲ್ಲಿ ಬುಧವಾರ ನಡೆದಿದೆ.
ಗ್ರಾಮದ ರೈತ ಗದಿಗೆಪ್ಪ ಹೊಸಮನಿ ಎಂಬುವರ ಜಮೀನಿನಲ್ಲಿ ಪೈಪ್ಲೈನ್ ಒಡೆದಿರುವುದು.
ಆನೂರು ಕೆರೆಗೆ ತಾಲೂಕಿನ ತುಂಗಭದ್ರಾ ನದಿಪಾತ್ರದಿಂದ ನೀರು ಹರಿಸಲು ಪೈಪ್ಲೈನ್ ಅಳವಡಿಸಲಾಗಿದೆ. ಆದರೆ, ಪೈಪ್ಲೈನ್ ಏಕಾಏಕಿ ಒಡೆದು ಹೋಗಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ತುಂಗಭದ್ರಾ ನದಿಯ ಬೈರಂಪಾದ ಬಳಿ ನೀರು ಹರಿಸುವುದನ್ನು ನಿಲ್ಲಿಸಿದ ಬಳಿಕ ಪೈಪ್ಲೈನ್ನಲ್ಲಿ ನೀರು ಪೋಲಾಗುವುದು ನಿಂತಿದೆ.
ಆದರೆ, ಸಾವಿರಾರು ರೂ. ಖರ್ಚು ಮಾಡಿ ಹತ್ತಿ ಬೆಳೆದಿದ್ದೇನೆ. ಬೆಳೆ ಕೂಡ ಉತ್ತಮವಾಗಿ ಬಂದಿದ್ದು, ಕಾಯಿ ಕೂಡ ಕಟ್ಟಿತ್ತು. ಪೈಪ್ಲೈನ್ ಒಡೆದಿದ್ದರಿಂದ ನೀರು ಸಂಪೂರ್ಣ ಜಮೀನಿನಲ್ಲಿ ನಿಂತುಕೊಂಡಿದೆ. ನಮ್ಮ ಜಮೀನು ಮಾತ್ರವಲ್ಲದೆ ಅಕ್ಕಪಕ್ಕದ ಜಮೀನಿಗೂ ಹರಿದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಗದಿಗೆಪ್ಪ ಹೊಸಮನಿ ಒತ್ತಾಯಿಸಿದ್ದಾರೆ.