More

    ಬೆಳೆವಿಮೆ ವಿತರಣೆ ಅನ್ಯಾಯ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕಾರ

    ಹಿರಿಯೂರು: ಬೆಳೆವಿಮೆ ಪರಿಹಾರ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ಖಂಡೇನಹಳ್ಳಿ ಗ್ರಾಮದ ರೈತರು ಬುಧವಾರ ಪ್ರತಿಭಟನೆ ನಡೆಸಿದರು.

    2023-2024ನೇ ಸಾಲಿನ ಮುಂಗಾರು ಹಂಗಾಮಿನ ಮಳೆಯಾಶ್ರಿತ ಬೆಳೆಗಳಿಗೆ ರೈತರು ವಿಮೆ ಪಾವತಿಸಿದ್ದು, ಮಳೆ ಕೊರತೆಯಿಂದ ಬೆಳೆ ನಷ್ಟ, ಇಳುವರಿ ಕುಸಿತ, ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತರು ಪಾವತಿಸಿದ ಪ್ರೀಮಿಯಂಗಿಂತ ಕಡಿಮೆ ಪರಿಹಾರ ಬಂದಿದೆ. ಕಳೆದ ವರ್ಷ ತಾಲೂಕಿನಲ್ಲಿ ಮಳೆ- ತೇವಾಂಶ ಕೊರತೆ, ಅನಾವೃಷ್ಟಿಯಿಂದ ಶೇಂಗಾ, ತೊಗರಿ, ಜೋಳ, ಸೂರ್ಯಕಾಂತಿ ಇತರ ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಸಾಲ ಪಡೆಯುವಾಗ ಬ್ಯಾಂಕಿನವರು ಕಡ್ಡಾಯವಾಗಿ ಬೆಳೆವಿಮೆ ತುಂಬಿಸಿಕೊಳ್ಳುತ್ತಾರೆ ಎಂದು ಹೇಳಿದರು.

    ಕೋಟಿಗಟ್ಟಲೆ ವಿಮೆ ಪ್ರೀಮಿಯಂ ಪಾವತಿಯಾದರೂ, ರೈತರಿಗೆ ದೊರೆಯಬೇಕಾದ ನೆರವು ಸಿಗುತ್ತಿಲ್ಲ.ಇದೊಂದು ರೀತಿ ಲಾಟರಿ ದಂಧೆಯಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯ ಅತಿ ಹಿಂದುಳಿದ ಬರಪೀಡಿತ, ಕಡಿಮೆ ಮಳೆ ಬೀಳುವ ಹೋಬಳಿ ಎಂಬ ಹಣೆಪಟ್ಟಿ ಪಡೆದಿರುವ ಧರ್ಮಪುರದ ಖಂಡೇನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಶೇ.9.42 ( ಎಕರೆಗೆ 2 ಸಾವಿರ) ಪಾವತಿಯಾಗಿದೆ. ತಾಲೂಕಿನ 4 ರಿಂದ 5 ಗ್ರಾಪಂ ವ್ಯಾಪ್ತಿಯ ಗ್ರಾಮದ ರೈತರಿಗೆ ಶೇ.10 ಕ್ಕಿಂತ ಕಡಿಮೆ ಬೆಳೆ ವಿಮೆ ಪಾವತಿಯಾಗಿದೆ ಎಂದು ದೂರಿದರು.

    ಅಬ್ಬಿನಹೊಳೆಗೆ ಶೂನ್ಯ, ಖಂಡೇನಹಳ್ಳಿ ಗ್ರಾಮದ ಜಮೀನಿಗೆ ಹೊಂದಿಕೊಂಡಿರುವ ಪಿ.ಡಿ.ಕೋಟೆ ಗ್ರಾಪಂ ವ್ಯಾಪ್ತಿಯ ಜಮೀನಿನ ರೈತರಿಗೆ ಎಕರೆಗೆ 13 ಸಾವಿರ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ನಮಗೇಕೆ ಈ ಅನ್ಯಾಯ, ಅಧಿಕಾರಿಗಳ ಬೇಜವಾಬ್ದಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

    ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ನಾವು ಯಾರ ಬಳಿ ನ್ಯಾಯ ಕೇಳಬೇಕು. ಕೆಲ ಗ್ರಾಪಂಗಳಲ್ಲಿ ಬೆಳೆ ವಿಮೆಯಾಗಿ ಬಂದಿರುವ ಮೊತ್ತ ಅವರು ತುಂಬಿದ ಪ್ರೀಮಿಯಂ ಕಂತಿಗೂ ಕಡಿಮೆ ಇರುವುದು ದುರಂತದ ಸಂಗತಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts