ಭಟ್ಕಳ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಗ್ರಾಮೀಣ ಭಾಗ ಸೇರಿ ಪಟ್ಟಣದ ಶಂಶುದ್ದೀನ್ ಸರ್ಕಲ್, ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿಗಳಲ್ಲೂ ನೀರು ನುಗ್ಗುತ್ತಿವೆ.
ಐಆರ್ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿ ಬದಿಯ ಜನರು ಎಷ್ಟೋತ್ತಿಗೆ ನೀರು ತುಂಬಿಕೊಳ್ಳುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಇನ್ನೊಂದೆಡೆ ರಂಗಿನಕಟ್ಟೆಯ ಬಳಿಯಲ್ಲಿ ಹೆದ್ದಾರಿ ಮೇಲೆ ನೀರು ನುಗ್ಗಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ವಾರದಿಂದ ಕೊಂಚ ಬಿಡುವು ನೀಡಿದ್ದ ಮಳೆರಾಯ ಬುಧವಾರದಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಎಲ್ಲೆಲ್ಲೂ ಜಲಧಾರೆಯೆ ಕಂಡು ಬರುತ್ತಿದೆ. ತಾಲೂಕಿನ ಹಲವೆಡೆಗಳಲ್ಲಿ ಮನೆಗಳು ಕುಸಿದಿದ್ದು, ಸಣ್ಣ ಪುಟ್ಟ ಹಾನಿಯಾದ ಬಗ್ಗೆ ವರದಿಯಾಗುತ್ತಿದೆ.
ಕಡಲಿಗಿಳಿಯದಂತೆ ಸಚಿವರ ಮನವಿ
ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಹವಮಾನ ಇಲಾಖೆ ಯಲ್ಲೋ ಅಲರ್ಟ್ ಘೊಷಣೆ ಮಾಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ (64.5 ಮಿ.ಮೀನಿಂದ 115.5 ಮಿ.ಮೀ) ಬೀಳುವ ಮುನ್ಸೂಚನೆಯನ್ನು ಹವಾಮಾನ ಸಂಸ್ಥೆ ಯಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30- 40 ಕಿಮೀ ವೇಗದಲ್ಲಿ ಗಾಳಿಯ ವೇಗವು ಸಂಭವಿಸುವ ಸಾಧ್ಯತೆಯಿದೆ. ಕರ್ನಾಟಕ ಕರಾವಳಿಯಲ್ಲಿ 40-45 ಕಿಲೋ ಮೀಟರ್ ವೇಗದಲ್ಲಿ 55 ಕಿಮೀ ವೇಗದಲ್ಲಿ ಗಾಳಿಯ ವೇಗವುಳ್ಳ ಹವಾಮಾನವು ಚಾಲ್ತಿಯಲ್ಲಿರಲಿದೆ. ಆತಂಕದ ವಾತಾವರಣ ನಿರ್ವಣವಾಗಿದ್ದರಿಂದ ಕರಾವಳಿಯ ಕರ್ನಾಟಕದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಮೀನುಗಾರರಿಗೆ ಮನವಿ ಮಾಡಿದ್ದಾರೆ.