ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಮತ್ತು ಎನ್ಪಿಆರ್ ವಿರೋಧಿಸಿ ದೇಶದ ಹಲವೆಡೆ ತಿಂಗಳುಗಳಿಂದ ಹೋರಾಟ ನಡೆಯುತ್ತಿದೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಹೋರಾಟದ ಕಿಚ್ಚು ಹತ್ತಿದ್ದು ಬೃಹತ್ ಮೆರವಣಿಗೆಯ ಮೂಲಕ ಹೋರಾಟಗಾರರು ರಾಜ್ಯ ಸಚಿವಾಲಯದತ್ತ ಹೊರಟಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆಸದಂತೆ ತಡೆಗಟ್ಟಲು ಮದ್ರಾಸ್ ಹೈ ಕೋರ್ಟ್ ಮಂಗಳವಾರದಂದು ಆದೇಶ ಹೊರಡಿಸಿತ್ತು. ನ್ಯಾಯಮೂರ್ತಿಗಳಾದ ಎಂ. ಸತ್ಯನಾರಾಯಣ್ ಮತ್ತು ಆರ್.ಹೇಮಲತಾ ಇದ್ದ ನ್ಯಾಯಪೀಠವು ಹೋರಾಟಗಾರರು ಮೆರವಣಿಗೆ ನಡೆಸುವುದನ್ನು ತಡೆಗಟ್ಟಲು ಕೋರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಬಂದಿದ್ದ ಪಿಐಎಲ್ನ ಆದೇಶವನ್ನು ಅಂಗೀಕರಿಸಿದ್ದರು.
ಇಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದು, ಯಾವುದೇ ಹಿಂಸಾತ್ಮಕ ಚಟುವಟಿಕೆ ನಡೆಯದಿರುವಂತೆ ನೋಡಿಕೊಳ್ಳುವ ಸಲುವಾಗಿ ಸಾವಿರಾರು ಪೊಲೀಸರನ್ನು ನೇಮಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥ್ ತಿಳಿಸಿದ್ದಾರೆ. ನ್ಯಾಯಾಲಯದಿಂದ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)