ಮುಂಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಕ್ಷೇಪದಿಂದಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ ವಿಳಂಬಗೊಂಡಿತ್ತು. ಇದೀಗ ಟೂರ್ನಿಗೆ 100 ದಿನಗಳು ಬಾಕಿ ಇರುವಾಗ ಕೊನೆಗೂ ವೇಳಾಪಟ್ಟಿ ಬಿಡುಗಡೆಯಾಗಿದ್ದರೂ, ಪಾಕಿಸ್ತಾನದ ತಗಾದೆ ಮಾತ್ರ ಮುಂದುವರಿದಿದೆ. ಅಕ್ಟೋಬರ್ 5ರಿಂದ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ “ಗ್ಯಾರಂಟಿ’ಯನ್ನು ನೀಡಲು ಪಾಕಿಸ್ತಾನ ಈಗಲೂ ಹಿಂದೇಟು ಹಾಕುತ್ತಿದೆ.
“ಭಾರತದಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಮತ್ತು ಅಹಮದಾಬಾದ್ನಲ್ಲಿ ಅಕ್ಟೋಬರ್ 15ರಂದು ಆಡುವ ಬಗ್ಗೆ ಅಥವಾ ಸೆಮಿಫೈನಲ್ಗೇರಿದರೆ ಮುಂಬೈನಲ್ಲಿ ಆಡುವ ಬಗ್ಗೆ ಸರ್ಕಾರ ಹಸಿರು ನಿಶಾನೆ ತೋರಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಮಂಗಳವಾರ ಮುಂಬೈನಲ್ಲಿ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ತಿಳಿಸಿದ್ದಾರೆ.
ಪಾಕಿಸ್ತಾನ ತಂಡ ವಿಶ್ವಕಪ್ನಲ್ಲಿ ಭಾರತ ತಂಡದ ವಿರುದ್ಧ ಅಹಮದಾಬಾದ್ನಲ್ಲಿ, ಅ್ಘಾನಿಸ್ತಾನದ ವಿರುದ್ಧ ಚೆನ್ನೆ$ನಲ್ಲಿ ಮತ್ತು ಆಸ್ಟ್ರೆಲಿಯಾ ತಂಡದ ವಿರುದ್ಧ ಬೆಂಗಳೂರಿನಲ್ಲಿ ಆಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಐಸಿಸಿ ಈ ಆಕ್ಷೇಪವನ್ನು ಕಡೆಗಣಿಸಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ತರಲು ನಿರಾಕರಿಸಿದೆ.
ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ನಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಪಾಕಿಸ್ತಾನದ ಸರ್ಕಾರ ಇನ್ನೂ ಯಾವುದೇ ನಿರ್ದೇಶನ ನೀಡಿಲ್ಲ. ಪಾಕಿಸ್ತಾನದಲ್ಲಿ ಇನ್ನು 60 ದಿನಗಳ ಒಳಗಾಗಿ ಚುನಾವಣೆ ನಡೆಯಲಿದ್ದು, ವಿಶ್ವಕಪ್ ವೇಳೆ ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಹಾಲಿ ಸರ್ಕಾರಕ್ಕಿಂತ ಹೊಸ ಸರ್ಕಾರದ ನಿಲುವೇ ವಿಶ್ವಕಪ್ನಲ್ಲಿ ಪಾಕ್ ತಂಡ ಆಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲೂ ಶ್ರೀ ಹೊಸ ಆಡಳಿತ ಮಂಡಳಿ ಬರಲಿದೆ. ಸದ್ಯ ಪಿಸಿಬಿ ಚುನಾವಣೆ ಜುಲೈ 17ರವರೆಗೆ ಮುಂದೂಡಿಕೆಯಾಗಿದೆ. ಆದರೆ ವಿಶ್ವಕಪ್ ವೇಳೆ ಪಿಸಿಬಿಯಲ್ಲೂ ಹೊಸ ಆಡಳಿತ ಮಂಡಳಿ ಇರುವುದು ಸ್ಪಷ್ಟ.
ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಪಿಸಿಬಿ ಈಗಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರೂ, ಪಾಕ್ ತಂಡ ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಪಾಕ್ ತಂಡ ರಾಜಕೀಯ ಕಾರಣಗಳಿಂದಾಗಿ ವಿಶ್ವಕಪ್ನಲ್ಲಿ ಮುಂಬೈನಲ್ಲಿ ಯಾವುದೇ ಪಂದ್ಯ ಆಡದಂತೆ ವೇಳಾಪಟ್ಟಿ ರೂಪಿಸಲಾಗಿದೆ. 2016ರ ಟಿ20 ವಿಶ್ವಕಪ್ನಲ್ಲಿ ಕೊನೆಯದಾಗಿ ಪಾಕ್ ತಂಡ ಭಾರತದಲ್ಲಿ ಆಡಿತ್ತು.
2011ರಲ್ಲಿ ಸಚಿನ್ಗಾಗಿ ಗೆದ್ದೆವು, ಈ ಬಾರಿ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲೋಣ ಎಂದ ಸೆಹ್ವಾಗ್