ಮೊಹಾಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಪ್ರಕಟಿಸಿರುವ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ನಿವೃತ್ತಿಯಿಂದ ವಾಪಸಾಗಿ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಸಾಧ್ಯತೆ ಕಾಣಿಸಿದೆ. ನಿವೃತ್ತಿ ಹಿಂಪಡೆದು ಮುಂಬರುವ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ತಂಡದ ಪರ ಆಡುವಂತೆ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ)38 ವರ್ಷದ ಯುವರಾಜ್ ಸಿಂಗ್ಗೆ ಮನವಿ ಸಲ್ಲಿಸಿರುವುದು ಇದಕ್ಕೆ ಕಾರಣವಾಗಿದೆ. ಆಟಗಾರ ಮತ್ತು ಮೆಂಟರ್ ಆಗಿ ಪಂಜಾಬ್ ತಂಡಕ್ಕೆ ದೇಶೀಯ ಕ್ರಿಕೆಟ್ನಲ್ಲಿ ನೆರವಾಗುವಂತೆ ಕೇಳಿಕೊಳ್ಳಲಾಗಿದೆ.
ಚಂಡೀಗಢ ತಂಡವೂ ರಚನೆಯಾದ ಬಳಿಕ ಪಂಜಾಬ್ ಇತ್ತೀಚೆಗೆ ಕೆಲ ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಮನನ್ ವೊಹ್ರಾ ಮತ್ತು ಬರಿಂದರ್ ಸ್ರಾನ್ ಇವರಲ್ಲಿ ಪ್ರಮುಖವಾದವರು. ಯುವ ಬ್ಯಾಟ್ಸ್ಮನ್ಗಳಾದ ಜೀವನ್ಜೋತ್ ಸಿಂಗ್ ಮತ್ತು ತರುವರ್ ಕೊಹ್ಲಿ ಕೂಡ ಕ್ರಮವಾಗಿ ಛತ್ತೀಸ್ಗಢ ಮತ್ತು ಮೇಘಾಲಯಕ್ಕೆ ವಲಸೆ ಹೋಗಿದ್ದಾರೆ. ಹೀಗಾಗಿ ಪಂಜಾಬ್ನ ಯುವ ತಂಡಕ್ಕೆ ಯುವರಾಜ್ ಸಿಂಗ್ ಅವರಂಥ ಅನುಭವಿ ಆಟಗಾರರ ಮಾರ್ಗದರ್ಶನ ಅಗತ್ಯವಿದೆ ಎಂದು ಪಿಸಿಎ ಕಾರ್ಯದರ್ಶಿ ಪುನೀತ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಿವೃತ್ತಿಯಿಂದ ವಾಪಸಾಗುವ ಬಗ್ಗೆ ಯುವರಾಜ್ ಸಿಂಗ್ ಇನ್ನೂ ಪಿಸಿಎಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕರೊನಾ ಹಾವಳಿಯ ನಡುವೆಯೂ ಯುವರಾಜ್ ಸಿಂಗ್ ಕಳೆದ ತಿಂಗಳು ಚಂಡೀಗಢದಲ್ಲಿ ಯುವ ಆಟಗಾರರಾದ ಶುಭಮಾನ್ ಗಿಲ್, ಪ್ರಭಸಿಮ್ರನ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಅಭಿಷೇಕ್ ಶರ್ಮ ಮತ್ತು ಹರ್ಪ್ರೀತ್ ಬ್ರಾರ್ ಜತೆ ಅಭ್ಯಾಸ ನಡೆಸಿದ್ದರು. ಈ ಆಟಗಾರರು ಐಪಿಎಲ್ಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಯುವರಾಜ್ ಸಿಂಗ್ ಕೂಡ ಸಾಥ್ ನೀಡಿದ್ದರು.
ಇದನ್ನೂ ಓದಿ: ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಒಲಿಸಿಕೊಂಡ ಡ್ರೀಮ್11, ಒಪ್ಪಂದದ ಮೊತ್ತವೆಷ್ಟು ಗೊತ್ತೇ?
ಆದರೆ ಯುವರಾಜ್ ಸಿಂಗ್ ಮರಳಿ ಕಣಕ್ಕಿಳಿಯಲು ಒಂದು ಸಣ್ಣ ಅಡ್ಡಿಯೂ ಇದೆ. ಯುವಿ ಕಳೆದ ವರ್ಷ ನಿವೃತ್ತಿ ಪ್ರಕಟಿಸಿದ ಬಳಿಕ ಕೆನಡದ ಟಿ20 ಲೀಗ್ನಲ್ಲಿ ಆಡಿದ್ದರು. ಯುವಿ ನಿವೃತ್ತಿ ಪ್ರಕಟಿಸಿದ್ದ ಕಾರಣದಿಂದಾಗಿ ಬಿಸಿಸಿಐ, ವಿದೇಶಿ ಟಿ20 ಲೀಗ್ನಲ್ಲಿ ಆಡಲು ಎನ್ಒಸಿ ನೀಡಿತ್ತು. ಹೀಗಾಗಿ ಈಗ ಅವರು ಮರಳಿ ಕಣಕ್ಕಿಳಿಯಲು ಬಿಸಿಸಿಐ ಅವಕಾಶ ನೀಡುವುದೇ ಎಂಬ ಪ್ರಶ್ನೆ ಎದುರಾಗಿದೆ. ಆದರೆ ಯುವಿ ಆಪ್ತ ಸೌರವ್ ಗಂಗೂಲಿ ಅವರೇ ಬಿಸಿಸಿಐ ಅಧ್ಯಕ್ಷರಾಗಿ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇಡಬಹುದಾಗಿದೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಭಾರತ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.