ರಾಜಸ್ಥಾನ: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅನ್ನು ಕಿಲೋ ಮೀಟರ್ಗಟ್ಟಲೇ ರೋಗಿಯ ಸಂಬಂಧಿಕರು ರಸ್ತೆಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ. ದುರಾದೃಷ್ಟವಶಾತ್ ಆ ರೋಗಿ ಮಾರ್ಗಮಧ್ಯೆ ಆಂಬುಲೆನ್ಸ್ನಲ್ಲೇ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜಸ್ಥಾನದ ಬನ್ಸರಾ ಜಿಲ್ಲೆಯ ದಾನಪುರ ಪ್ರದೇಶದ 40 ವರ್ಷದ ತೇಜಿಯಾ ಮೃತರು. ದಾನಪುರದಲ್ಲಿ ತೇಜಿಯಾ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದು, ಕೂಡಲೇ ಈತನ ಸಂಬಂಧಿಕರು ಆಂಬುಲೆನ್ಸ್ಗೆ ಕರೆ ಮಾಡಿ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆಸ್ಪತ್ರೆಗೆ ತಲುಪಲು ಇನ್ನೂ 10-12 ಕಿ.ಮೀ. ದೂರ ಇರುವಾಗಲೇ ರತ್ಲಂ ರಸ್ತೆಯ ಟೋಲ್ ಪ್ಲಾಜಾದಲ್ಲಿ ಆಂಬುಲೆನ್ಸ್ ಇದ್ದಕ್ಕಿದ್ದಂತೆ ನಿಂತಿತು.
ಏನಾಯಿತೆಂದು ನೋಡಿದಾಗ ಡೀಸೆಲ್ ಖಾಲಿಯಾಗಿತ್ತು. ಅತ್ತ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಡೀಸೆಲ್ ಹಾಕಿಸಿದರೂ ಆಂಬುಲೆನ್ಸ್ ಸ್ಟಾರ್ಟ್ ಆಗಲಿಲ್ಲ. ಮತ್ತೊಂದು ಆಂಬುಲೆನ್ಸ್ಗೆ ಕರೆ ಮಾಡಿದ್ದು, ಅದು ಬರೋಕೆ ಒಂದು ತಾಸು ತಡವಾಗಿದೆ. ಆತಂಕಗೊಂಡ ರೋಗಿಯ ಸಂಬಂಧಿಕರು ಕಿಲೋ ಮೀಟರ್ ದೂರದವರೆಗೂ ರೋಗಿ ಇದ್ದ ಆಂಬುಲೆನ್ಸ್ ಅನ್ನು ಹಿಂಬದಿಯಿಂದ ತಳ್ಳಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ರೋಗಿಯು ಸೂಕ್ತ ಚಿಕಿತ್ಸೆ ಸಿಗದೆ ಮಾರ್ಗಮಧ್ಯೆ ಆಂಬುಲೆನ್ಸ್ನಲ್ಲೇ ಪ್ರಾಣಬಿಟ್ಟಿದ್ದಾರೆ. ನಂತರ ಬಂದ ಮತ್ತೊಂದು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತಪಾಸಣೆ ಮಾಡಿದ ವೈದ್ಯರು ರೋಗಿಯು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆಯು ತನಿಖೆ ನಡೆಸುವಂತೆ ಸೂಚಿಸಿದೆ.
ಉತ್ತರ ಪ್ರದೇಶದ ಪ್ರತಾಪಗಢ ಮೂಲದ ತೇಜಿಯಾ ಅವರು ತನ್ನ ಮಗಳನ್ನು 3 ತಿಂಗಳ ಹಿಂದಷ್ಟೇ ಬನ್ಸ್ವಾರದ ದಾನಪುರದ ವ್ಯಕ್ತಿಯೊಬ್ಬರಿಗೆ ಕೊಟ್ಟು ಮದುವೆ ಮಾಡಿದ್ದರು. ಅಂದಿನಿಂದ ಮಗಳು ಮತ್ತು ಅಳಿಯನೊಂದಿಗೆ ರಾಜಸ್ಥಾನದಲ್ಲಿ ವಾಸಿಸುತ್ತಿದ್ದರು. ನಿನ್ನೆ(ಗುರುವಾರ) ಇದ್ದಕ್ಕಿದ್ದಂತೆ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲು ಇನ್ನಿಲ್ಲದ ಕಸರತ್ತು ನಡೆಸಲಾಯಿತಾದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.(ಏಜನ್ಸೀಸ್)
Rajasthan | A patient, in Banswara, died in an ambulance allegedly due to a delay caused because of lack of fuel in it due to which the vehicle stopped in between. Relatives of patients were also seen pushing the ambulance on the way. (25.11) pic.twitter.com/7vuD3hrC0H
— ANI MP/CG/Rajasthan (@ANI_MP_CG_RJ) November 26, 2022
ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!