ಶಿವಮೊಗ್ಗ: ಮೊದಲೆಲ್ಲಾ ವೈವಾಹಿಕ ಸಂಬಂಧಗಳು ಪರಿಚಿತರ ಮೂಲಕವೇ ನಡೆಯುತ್ತಿದ್ದವು. ಈಗ ಈ ಕೆಲಸಕ್ಕೆ ಹತ್ತಾರು ಮ್ಯಾಟ್ರಿಮೋನಿಗಳು ಇವೆ. ಹೀಗಾಗಿ ಹೆಣ್ಣು-ಗಂಡು ಹುಡುಕುವವರು ಜಾತಕವನ್ನು ಮ್ಯಾಟ್ರಿಮೋನಿಗೆ ಕೊಟ್ಟು ಸಂಗಾತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ, ಮದುವೆ ಆಗಲು ಮಹತ್ತದ ಆಸೆಯೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಬಳಿಯೇ ಹೆಣ್ಣು ಕೇಳಿಕೊಂಡು ಅರ್ಜಿ ಕೊಟ್ಟಿದ್ದಾನೆ! ಈ ಪತ್ರ ಸಖತ್ ವೈರಲ್ ಆಗುತ್ತಿದೆ.
ಅರೇ, ಇದೇನಿದು ಎಂದು ಅಚ್ಚರಿಯಾಗುತ್ತಿದೆಯಾ? ಹೌದು, ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿ ಈಗ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವಕ ಮದುವೆಯಾಗಲು ‘ನನಗೊಂದು ಹೆಣ್ಣು ಬೇಕು, ಹುಡುಕಿ ಕೊಡಿ’ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.
ಇದುವರೆಗೆ ಕಾಣೆಯಾದವರನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದ್ದ ಪೊಲೀಸರು ಈಗ, ಯುವಕನಿಗೆ ವಧು ಹುಡುಕಿ ಮದುವೆ ಮಾಡಿಕೊಡಬೇಕಾದ ಪರಿಸ್ಥಿತಿ ಬಂದಿದೆ..!
ಭದ್ರಾವತಿಯ ಪ್ರವೀಣ್ ಎಂಬ ಯುವಕ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ, ಚಿಟ್ಸ್ ಕಂಪನಿಯಲ್ಲಿ ಕೆಲಸ ಮಾಡಿ ಈಗ ಸ್ವಂತ ಊರು ಭದ್ರಾವತಿಗೆ ವಾಪಸ್ ಬಂದು ಸ್ವಂತ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾರೆ.
‘ಮದುವೆಯಾಗಲು ಹಲವು ಕಡೆ ಹೆಣ್ಣು ನೋಡಿದೆ. ಯಾವುದೋ ಸರಿ ಹೋಗದ ಕಾರಣ ತಮ್ಮ ಅಧೀನದಲ್ಲಿ ಯಾರಾದರೂ ವಧು ಕಂಡು ಬಂದರೆ ನನಗೆ ದಯವಿಟ್ಟು ತಿಳಿಸಿ, ಸಪ್ತಪದಿ ತುಳಿಯಲು ಸಹಾಯ ಮಾಡಿ’ ಎಂದು ಎಸ್ಪಿಗೆ ಯುವಕ ಮನವಿ ಮಾಡಿದ್ದಾರೆ.
ಮನವಿ ಪತ್ರದೊಂದಿಗೆ ಜಾತಕದ ಬದಲಿಗೆ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಗಳನ್ನೂ ಲಗತ್ತಿಸಿರುವ ಯುವಕ, ನನ್ನ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದರೆ ಸಂಪರ್ಕ ಮಾಡಬಹುದು ಎಂದು ಇಬ್ಬರು ಪರಿಚಿತ ವ್ಯಕ್ತಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ.
ತಂದೆ ತೋಟಗಾರಿಕೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು, ಈಗ ಅವರು ಇಲ್ಲ. ತಾಯಿ ಇದ್ದಾರೆ. ಒಬ್ಬ ಅಣ್ಣ ಇದ್ದು ಅವರ ಮದುವೆಯಾಗಿದೆ ಎಂದು ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಣ್ಣು ನೋಡಲು ಇಷ್ಟು ಮಾಹಿತಿ ಸಾಕಾಗಬಹುದು. ಆದರೆ ಪೊಲೀಸರು ಏನು ಮಾಡುತ್ತಾರೋ ಗೊತ್ತಿಲ್ಲ. ಪೊಲೀಸರು ಹುಡುಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೋ? ಮನವಿ ಪತ್ರ ತೆಗೆದುಕೊಂಡು ಸಾಗ ಹಾಕಿದ್ದಾರೋ? ಗೊತ್ತಿಲ್ಲ.
ಯುವಕನ ಮನವಿ ಪತ್ರದ ಫೋಟೋ ವೈರಲ್ ಆಗುತ್ತಿದ್ದಂತೆ ಅವರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಪತ್ರದಲ್ಲಿ ಪ್ರವೀಣ್ ಬರೆದಿದ್ದ ಮೊಬೈಲ್ ನಂಬರ್ಗೆ ಕರೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸ್ವಿಚ್ ಆಫ್ ಆಗಿದೆ. ಇನ್ನು ಮನವಿ ಪತ್ರವನ್ನು ಬಹಿರಂಗಗೊಳಿಸಿದ್ದು ಯಾರೆಂದು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ.
ಶಿಸ್ತು ಕ್ರಮ?: ಎಸ್ಪಿಗೆ ಸಲ್ಲಿಸಿರುವ ಮನವಿ ಪತ್ರದ ಮೇಲೆ ಇನ್ವಾರ್ಡ್ ನಂಬರ್ ಹಾಕಿದ್ದು, ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಇದು ಪೊಲೀಸ್ ಇಲಾಖೆಯಿಂದಲೇ ಹೊರಗೆ ಹೋಗಿರುವ ಕಾರಣ ಪತ್ರವನ್ನು ಲೀಕ್ ಮಾಡಿದವರ ಮೇಲೆ ಎಸ್ಪಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಇನ್ವಾರ್ಡ್ ನಂಬರ್ ಇಲ್ಲದೆ ಪತ್ರ ವೈರಲ್ ಆಗಿದ್ದರೆ ಸಂಬಂಧಪಟ್ಟ ಶಾಖೆಯ ಸಿಬ್ಬಂದಿ ಪಾರಾಗಲು ಅವಕಾಶಗಳಿದ್ದವು. ಆದರೆ ಇನ್ವಾರ್ಡ್ ನಂಬರ್ ಹಾಕಿದ ನಂತರ ಪತ್ರ ವೈರಲ್ ಆಗಿರುವುದರಿಂದ ಸಂಬಂಧಪಟ್ಟ ಸಿಬ್ಬಂದಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಯುವಕರೇ ಈ ಮಂಗನ ಸ್ನೇಹಿತರು! ಬೈಕ್ನಲ್ಲಿ ಬಿಂದಾಸ್ ಸವಾರಿ, ಹೋಟೆಲ್ನಲ್ಲಿ ತಿಂಡಿ ತಿನ್ನುವ ವಾನರ…
ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!