ನವದೆಹಲಿ: ಸಾವು ಯಾವಾಗ? ಹೇಗೆ? ಬರುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಲಾಗದು. ಈ ಯಾಂತ್ರಿಕ ಜಗತ್ತಿನಲ್ಲಿ ಯಾವುದು ಕೂಡ ಸುರಕ್ಷಿತವಲ್ಲ. ಸುಮ್ಮನೆ ಕುಳಿತಿದ್ದರು ಸಹ ಸಾವು ನಮ್ಮ ಪಕ್ಕದಲ್ಲೇ ಇರುತ್ತದೆ ಎಂಬುದಕ್ಕೆ ಈ ಭಯಾನಕ ಘಟನೆ ತಾಜಾ ಉದಾಹರಣೆಯಾಗಿದೆ.
ಹೌದು, ಪ್ರಯಾಣಿಕನೊಬ್ಬ ರೈಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸುತ್ತಿದ್ದಾಗ ಕಿಟಕಿಯಿಂದ ತೂರಿ ಬಂದ ಕಬ್ಬಿಣ ಸಲಾಕೆಯೊಂದು ಪ್ರಯಾಣಿಕನ ಕುತ್ತಿಗೆಯನ್ನು ಇರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಹರಿಕೇಶ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ. ಈತ ನಿನ್ನೆ (ಡಿ.02) ದೆಹಲಿಯಿಂದ ಉತ್ತರ ಪ್ರದೇಶದ ಕಾನ್ಪುರ್ಗೆ ತೆರಳುತ್ತಿದ್ದ ನಿಲಾಂಚಲ್ ಎಕ್ಸ್ಪ್ರೆಸ್ ರೈಲನ್ನು ಏರಿದ್ದ. ರೈಲು ಬಿಹಾರದ ದನ್ವಾರ್ ಮತ್ತು ಉತ್ತರ ಪ್ರದೇಶದ ಸೊಮ್ನಾ ನಡುವೆ ಇದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ರೈಲ್ವೆ ಹಳಿಗಾಗಿ ಬಳಸುತ್ತಿದ್ದ ಕಬ್ಬಿಣದ ಸಲಾಕೆ ಕಿಟಕಿಯಿಂದ ತೂರಿ ಬಂದು ದುಬೆ ಕುತ್ತಿಗೆಯನ್ನು ನುಸುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬೆನ್ನಲ್ಲೇ ರೈಲನ್ನು ಆಲಿಗಢ ಜಂಕ್ಷನ್ನಲ್ಲಿ ನಿಲ್ಲಿಸಲಾಯಿತು. ಬಳಿಕ ಆತನ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿ ಮಾಹಿತಿ ನೀಡಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ವರ್ಗಾವಣೆ ಪ್ರಸ್ತಾವನೆಗೆ ಬೊಮ್ಮಾಯಿ ಬ್ರೇಕ್: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಮುಗಿಯದ ಸರದಿ