ಹುಬ್ಬಳ್ಳಿ : ಪರಿಶ್ರಮ, ತಾಳ್ಮೆ, ಶ್ರದ್ಧೆ, ನಿಯಮಿತ ಅಭ್ಯಾಸಗಳನ್ನು ನಿತ್ಯದ ಜೀವನದ ಮೆಟ್ಟಿಲನ್ನಾಗಿಸಿಕೊಳ್ಳುವ ವ್ಯಕ್ತಿಗೆ ಭವಿಷ್ಯದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ಶಿರೂರ ಪಾರ್ಕ್ ಉದ್ಯಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶೈಲಶ್ರೀ ಮಂಜುನಾಥ ಫೈನ್ ಆರ್ಟ್ಸ್ ಆಂಡ್ ಎಜ್ಯುಕೇಶನ್ನ 16ನೇ ವಾರ್ಷಿಕೋತ್ಸವ ‘ಕಲಾ ಮುತ್ತುಗಳ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅತ್ಯುನ್ನತವಾದದ್ದನ್ನು ಸಾಧಿಸುವ ಗುರಿ ಹೊಂದಬೇಕು ಹಾಗೂ ಅದನ್ನು ಈಡೇರಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಲಾ ಪ್ರದರ್ಶನದಲ್ಲಿ ಜಾನಪದ ನೃತ್ಯ, ಜಗ್ಗಲಗಿ, ಲಂಬಾಣಿ ನೃತ್ಯ, ಸಮೂಹ ತಬಲ ವಾದನ, ಭರತನಾಟ್ಯ, ಕರಡಿ ಮಜಲು, ವಯಲಿನ್ ವಾದನ, ಸುಗಮ ಸಂಗೀತ, ಡೊಳ್ಳು ಕುಣಿತ, ಸಮರ ಕಲೆ, ಮತ್ತು ಜೋಗತಿ ನೃತ್ಯದಲ್ಲಿ ವಿವಿಧ ಕಲಾವಿದರು ಭಾಗವಹಿಸಿದ್ದರು.
ಕಲಾವಿದರಾದ ಡಾ. ಗುರುಬಸವ ಮಹಾಮನೆ, ವೀರೇಶ ಅಕ್ಕಿ, ಪಲ್ಲವಿ ಕಾನಪೇಟ ಮತ್ತು ಟೋನಿ ನಾಗಪೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ಕಲಾವಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರವಿರಾಜ ಕೊಡ್ಲಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಮಿತ್ ಶಿಂಧೆ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಬಾಗೂನವರ ನಿರೂಪಿಸಿದರು.