More

    ಮೃತದೇಹ ಭಾರತಕ್ಕೆ ತಂದರೂ ವಿಮಾನದಿಂದ ಕೆಳಗಿಳಿಸದೇ ವಾಪಸ್ ಕಳುಹಿಸಿದ್ದೇಕೆ?

    ನವದೆಹಲಿ: ಕರೊನಾದಿಂದ ವಿಶ್ವವೇ ಸಂಕಷ್ಟದಲ್ಲಿರುವಾಗ ದೂರದ ದೇಶದಲ್ಲಿದ್ದರೂ ಮಗ ಸುರಕ್ಷಿತವಾಗಿದ್ದಾನೆ ಎಂದೇ ಆ ಹಿರಿಯ ಜೀವಗಳು ನೆಮ್ಮದಿಯಿಂದಿದ್ದವು. ಆದರೆ, ಏಪ್ರಿಲ್​ 17ರಂದು ಬರಸಿಡಿಲೊಂದು ಆ ಕುಟುಂಬಕ್ಕೆ ಬಡಿಯಿತು. ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದ ಮಗ ಕಮಲೇಶ್​ ಭಟ್​ ಹೃದಯಸ್ತಂಭನದಿಂದ ಇನ್ನಿಲ್ಲವಾಗಿದ್ದಾನೆ ಎಂಬ ಸುದ್ದಿ ಆತನ ಕಂಪನಿಯ ಎಚ್​ಆರ್​ ವಿಭಾಗದವರು ನೀಡಿದ್ದರು.

    ಅಬುದಾಬಿಯ ಸ್ಥಳೀಯರು ಹಾಗೂ ಆತನ ಸ್ನೇಹಿತರ ನೆರವಿನಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಭಾರತೀಯ ದೂತಾವಾಸದಿಂದ ಅನುಮತಿಯನ್ನು ಪಡೆದಿದ್ದಾಯಿತು.

    ಕಮಲೇಶ್​ ತೆಹ್ರಿ ಗಡ್ವಾಲ್​ನ ನಿವಾಸಿಯಾಗಿದ್ದ. ಮನೆಗೆ ಮೃತದೇಹವನ್ನು ತರಲು ಆತನ ಸಂಬಂಧಿಕರು ವಿಶೇಷ ಅನುಮತಿ ಪತ್ರವನ್ನು ಪಡೆದು ದೆಹಲಿಗೆ ಬಂದಿದ್ದರು. ಅಬುದಾಬಿಯಿಂದ ವಿಮಾನ ಬರುತ್ತಿದ್ದಂತೆ, ಅದರಲ್ಲಿ ಕಮಲೇಶ್​ನ ಮೃತದೇಹವಿದ್ದು, ತಮಗೆ ಹಸ್ತಾಂತರಿಸುವಂತೆ ಕುಟುಂಬಸ್ಥರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಮೃತದೇಹವನ್ನು ಹಸ್ತಾಂತರಿಸದಂತೆ ನಮಗೆ ಗೃಹ ಸಚಿವಾಲಯದಿಂದ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ ಪಾಲಕರ ಹಾಗೂ ಸಂಬಂಧಿಕರ ಜಂಘಾಬಲವೇ ಉಡುಗಿ ಹೋಗಿದೆ. ಇಷ್ಟೇ ಅಲ್ಲ, ಬಂದ ವಿಮಾನದಲ್ಲೇ ಮೃತದೇಹವನ್ನು ವಾಪಸ್​ ಕಳುಹಿಸಿದ್ದು, ಮತ್ತಷ್ಟು ಕಂಗಾಲಾಗಿಸಿದೆ.

    ಗೃಹ ಸಚಿವಾಲಯದ ಆದೇಶದ ಪ್ರತಿಯನ್ನು ನಮಗೆ ಒದಗಿಸಿಲ್ಲ, ಚಾಲ್ತಿಯಲ್ಲಿಲ್ಲದ ದೂರವಾಣಿ ಸಂಖ್ಯೆಯನ್ನು ನೀಡಿ ವಿಚಾರಿಸಿ ಎಂದಿದ್ದಾರೆ ಎಂದು ಕಮಲೇಶ್​ ಸಂಬಂಧಿಕರು ಆರೋಪಿಸಿದ್ದಾರೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ವಿಶ್ಲೇಷಿಸಲಾಗಿದೆ.

    ಮೃತದೇಹ ರವಾನೆ ಅಥವಾ ಹಸ್ತಾಂತರ ಸಂದರ್ಭದಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕ್ರಮಗಳ ಬಗ್ಗೆ ಅಬುದಾಬಿಯಲ್ಲಿರುವ ದೂತಾವಾಸ ಕಚೇರಿಯೊಂದಿಗೆ ಚರ್ಚೆ ನಡೆಸಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಒಮ್ಮೆ ಬಂದರೆ ಮತ್ತೊಮ್ಮೆ…. ಗುಣಮುಖರಾದವರನ್ನು ಮತ್ತೆ ಮತ್ತೆ ಕಾಡಬಹುದು ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts