ಪಾಣಿಪತ್: ಪರವಾನಗಿ ಪಡೆದಿದ್ದ ಪಿಸ್ತೂಲ್ನಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಲ್ಲದೆ, ತಾನೂ ಶೂಟ್ ಮಾಡಿಕೊಂಡು 36 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ಪಾಣಿಪತ್ನ ರಾಜ್ ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರೇಷನ್ ಡಿಪೋ ಮಾಲೀಕ ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪೂನಮ್(35), ಮಗಳು ಪ್ರಾಚಿ(11) ಹಾಗೂ ಮಗ ಅಂನ್ಶು(7) ಕೂಡ ಗುಂಡಿನ ದಾಳಿಗೆ ಮೃತರಾಗಿದ್ದಾರೆ. ಮೂಲತಃ ಹರಿಯಾಣದ ಜಿಂದ್ ನಗರ ಸಮೀಪದ ಮೊರ್ಖಿ ಗ್ರಾಮದ ನಿವಾಸಿಯಾಗಿದ್ದ ಅನಿಲ್, ತಮ್ಮ ಕುಟುಂಬ ಸಮೇತ ರಾಜ್ ನಗರದ ಮೂರನೇ ಬೀದಿಯಲ್ಲಿ ವಾಸವಿದ್ದರು.
ಅನಿಲ್ ಯಾಕಿಂತಹ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂಬದು ತಕ್ಷಣ ತಿಳಿಯಲಿಲ್ಲ. ಆದರೆ, ಈ ಬಗ್ಗೆ ಮಾತನಾಡಿರುವ ಪೂನಮ್ ಸಹೋದರ ಪವನ್ ಕುಮಾರ್, ಪೂನಮ್ ಅವ ಮಾವ ನಫೆ ಸಿಂಗ್, ಅತ್ತೆ ಅಂಗೋರಿ ದೇವೆ, ಭಾವ ನವೀನ್, ಆತನ ಪತ್ನಿ ಕವಿತ, ಅನಿಲ್ ಸೋದರ ಸಂಬಂಧಿ ಮೋಹನ್ ಮತ್ತು ಮಹೆಂದರ್ ಕಳೆದ ಕೆಲ ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಆಸ್ತಿ ವಿಚಾರದಲ್ಲಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿದ್ದಾರೆ.
ಅನಿಲ್ ಅವರ ತಂದೆ ಮತ್ತು ತಾಯಿ ಶನಿವಾರ ರಾತ್ರಿಯೂ ಕೂಡ ಅನಿಲ್ಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕವೇ ಅನಿಲ್, ಪೂನಮ್, ಪ್ರಾಚಿ ಮತ್ತು ಅನ್ಶುರನ್ನು ತನ್ನ ಪಿಸ್ತೂಲ್ನಿಂದ ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಪೂನಮ್ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅನಿಲ್ ಕುಟುಂಬದ ಆರು ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ಅನಿಲ್ ತಂದೆ-ತಾಯಿ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಭಾನುವಾರ ಬೆಳಗ್ಗೆ ಅನಿಲ್ ಮನೆಗೆ ಬಂದಂತಹ ವ್ಯಕ್ತಿ ಸಾಕಷ್ಟು ಬಾರಿ ಅನಿಲ್ರನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಕಂಡು ಹತ್ತಿರದಲ್ಲೇ ವಾಸವಿದ್ದ ಅನಿಲ್ ಕುಟುಂಬಕ್ಕೆ ಮಾಹಿತಿ ನೀಡುತ್ತಾರೆ. ಬಳಿಕ ನರೆ ಮನೆಯ ಛಾವಣಿ ಮೂಲಕ ಅನಿಲ್ ಮನೆಗೆ ಜಿಗಿದು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)
ಬಾಲಿವುಡ್ ಸಿಂಗರ್ ಕನ್ನಿಕಾರನ್ನು ಬಿಡದೇ ಕಾಡುತ್ತಿರುವ ಕರೊನಾ: ಅಷ್ಟಕ್ಕೂ ಏನಾಗಿದೆ?
ತುಂಬು ಗರ್ಭಿಣಿಯಾಗಿದ್ರೂ ದೇಶದ ಮೊದಲ ಕರೊನಾ ಟೆಸ್ಟಿಂಗ್ ಕಿಟ್ ತಯಾರಿಸಿದ ಮಹಿಳೆ ಯಾರು ಗೊತ್ತಾ?