ಮುಂಬೈ: ಕರೊನಾ ವೈರಸ್ ಹಾವಳಿಯಿಂದಾಗಿ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಅದರಲ್ಲೂ ಕರೊನಾ ಮಹಾಮಾರಿಯಿಂದ ಅತ್ಯಧಿಕ ಹೊಡೆತ ತಿಂದಿರುವ ಮಹಾರಾಷ್ಟ್ರದಲ್ಲಿ ಜನರ ಬದುಕು ದುಸ್ತರವಾಗಿದೆ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಮುಂಬೈ ಪ್ರಮುಖ ಸ್ಥಾನ ಹೊಂದಿದ್ದು, ಇಲ್ಲಿನ ಕ್ರೀಡಾ ಚಟುವಟಿಕೆಗಳೂ ಈಗ ಸಂಪೂರ್ಣ ಬಂದ್ ಆಗಿವೆ. ಇದರಿಂದಾಗಿ ಇಲ್ಲಿನ ಫುಟ್ಬಾಲ್ ಅಕಾಡೆಮಿಗಳೂ ಸ್ತಬ್ಧಗೊಂಡಿವೆ. ಇದರಿಂದಾಗಿ ಅದರಲ್ಲಿನ ಕೋಚ್ಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಫುಟ್ಬಾಲ್ ಕೋಚ್ಗಳು ಈಗ ಜೀವನ ನಿರ್ವಹಣೆಗಾಗಿ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಕ್ರೀಡೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮುಂಬೈನ ಮೂವರು ಫುಟ್ಬಾಲ್ ಕೋಚ್ಗಳು ಈಗ ಹೊಟ್ಟೆಪಾಡಿಗಾಗಿ ಹೊಸ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಮಕ್ಕಳಿಗೆ ಫುಟ್ಬಾಲ್ ಆಟದ ಕೌಶಲಗಳನ್ನು ಹೇಳಿಕೊಡುತ್ತಿದ್ದ ಪ್ರಸಾದ್ ಬೋಸಲೆ, ಸಿದ್ಧೇಶ್ ಶ್ರೀವಾಸ್ತವ ಮತ್ತು ಸಾಮ್ರಾಟ್ ರಾಣಾ ಈಗ ಕರೊನಾ ಹಾವಳಿಯಿಂದಾಗಿ ಕ್ರಮವಾಗಿ ತರಕಾರಿ, ಕಬಾಬ್ ವ್ಯಾಪಾರಿ ಮತ್ತು ರೆಸ್ಟೊರೆಂಟ್ ಒಂದರ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್!
ನಾನು ತರಕಾರಿ ಮಾರಾಟ ಆರಂಭಿಸಿದಾಗ ಮೊದಲಿಗೆ ವಿಚಿತ್ರವೆನಿಸುತ್ತಿತ್ತು. ಯಾಕೆಂದರೆ ನಾನು ದೈಹಿಕ ಶಿಕ್ಷಣ ಪ್ರಾಧ್ಯಾಪಕ. ಡಬಲ್ ಗ್ರಾಚುವೇಟ್. ಆದರೆ ನನ್ನ ಮತ್ತು ಕುಟುಂಬದ ಹೊಟ್ಟೆಪಾಡಿಗಾಗಿ ಇದು ಅನಿವಾರ್ಯವಾಗಿದೆ. ಹೀಗಾಗಿ ಬೇರೆಲ್ಲ ಯೋಚನೆ ಬಿಟ್ಟುಬಿಟ್ಟಿದ್ದೇನೆ. ನಾನು ತರಕಾರಿಗಳನ್ನು ಭುಜದಲ್ಲಿ ಹೊತ್ತು ತರುತ್ತೇನೆ. ಬಳಿಕ ನನ್ನ ಗಾಡಿಯಲ್ಲಿಟ್ಟು ಬೀದಿಗಳಲ್ಲಿ ವ್ಯಾಪಾರ ಮಾಡುತ್ತೇನೆ ಎಂದು ಪ್ರಸಾದ್ ಬೋಸಲೆ ತಿಳಿಸಿದ್ದಾರೆ. ಕಳೆದ ಮಾರ್ಚ್ನಿಂದ ಅವರು ಫುಟ್ಬಾಲ್ ಕೋಚಿಂಗ್ ನಿಲ್ಲಿಸಿದ್ದಾರೆ. ಅವರು ಕೆಲಸ ನಿರ್ವಹಿಸುತ್ತಿದ್ದ ಶಾಲೆಯೂ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಮುಂಬೈ ಹೊರವಲಯದ ಕಾಂಡಿವಲಿಯಲ್ಲಿ ಅವರು ತರಕಾರಿ ಮಾರುತ್ತಿದ್ದಾರೆ.
ಸಿದ್ಧೇಶ್ ಶ್ರೀವಾಸ್ತವ ಅವರು ಎರಡು ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಜತೆಗೆ ಖಾಸಗಿ ಅಕಾಡೆಮಿಯಲ್ಲೂ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಅವರಿಗೆ ವೇತನವೂ ಸಿಕ್ಕಿಲ್ಲ. ಅವರ ತಂದೆಯೂ ನಿವೃತ್ತರಾಗಿದ್ದಾರೆ. ಹೀಗಾಗಿ ಕುಟುಂಬದ ನಿರ್ವಹಣೆಗಾಗಿ ಅವರು ಈಗ ಕಬಾಬ್ ಮಾರಾಟ ಆರಂಭಿಸಿದ್ದಾರೆ. ಮುಂಬೈ ನಗರದಲ್ಲಿ ಒಟ್ಟಾರೆ 60-70ರಷ್ಟು ಕೋಚ್ಗಳು ಈಗ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾಮ್ರಾಟ್ ರಾಣಾ ಅವರೂ ಜೂನಿಯರ್ ಐ-ಲೀಗ್ ತಂಡಗಳಿಗೆ ಕೋಚ್ ನೀಡುತ್ತಿದ್ದರು. ಆದರೆ ಈಗ ಅವರು ಡೆಲಿವರಿ ಬಾಯ್ ಆಗಿದ್ದಾರೆ. ಝೊಮಾಟೊ ಮತ್ತು ಸ್ವಿಗ್ಗಿಯಲ್ಲೂ ಅವರು ಕೆಲಸಕ್ಕೆ ಪ್ರಯತ್ನಿಸಿದ್ದರು. ಆದರೆ ಅಲ್ಲಿ ಕೆಲಸ ಖಾಲಿ ಇಲ್ಲದ ಕಾರಣ ಹತ್ತಿರದ ರೆಸ್ಟೋರೆಂಟ್ ಒಂದರಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡರು. ತಾನು ಹೊಂದಿದ್ದ ಸಣ್ಣ ಉಳಿತಾಯ ಮತ್ತು ತಾಯಿಯ ಚಿನ್ನ ಮಾರಿದ ಹಣವೆಲ್ಲ ಖರ್ಚಾದ ಬಳಿಕ ಅನಿವಾರ್ಯವಾಗಿ ಈ ಕೆಲಸಕ್ಕೆ ಬಂದೆ ಎಂದಿದ್ದಾರೆ ರಾಣಾ.