ನವದೆಹಲಿ: ಬಲೂಚಿಸ್ತಾನದಲ್ಲಿದ್ದ ಪಾಕಿಸ್ತಾನಿ ಸೇನಾಪಡೆ ಯೋಧರು ತಮ್ಮ ಸಮಾನು ಸರಂಜಾಮುಗಳು, ಶಸ್ತ್ರಾಸ್ತ್ರಗಳನ್ನೆಲ್ಲ ಬಿಟ್ಟು ಪೇರಿ ಕಿತ್ತಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕ್ ಸೇನೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿರುವುದು ಇದಕ್ಕೆ ಕಾರಣ.
ಗಡಿಯಲ್ಲಿ ಪಾಕ್ ಯೋಧರು ನಿರ್ಮಿಸಿಕೊಂಡಿದ್ದ ಹೊರಠಾಣೆಗಳ ಮೇಲೆ ಕಲ್ಲುತೂರಾಟ ಮಾಡಿರುವ ಪ್ರತಿಭಟನಾಕಾರರು, ಅವುಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಆ ಪ್ರದೇಶದಲ್ಲಿರುವ ಮಿಲಿಟರಿ ಕಟ್ಟಡಗಳಿಗೂ ಬೆಂಕಿ ಹಚ್ಚಿದ್ದಾರೆ.
ಪಾಕಿಸ್ತಾನ ಮತ್ತು ಬಲೂಚಿಸ್ತಾನದಲ್ಲಿ ವಾಸವಾಗಿರುವ ಬಲೂಚಿಸ್ತಾನಿಗಳು ಪಾಕ್ ಮತ್ತು ಬಲೂಚಿಸ್ತಾನದ ನಡುವಿನ ಗಡಿರೇಖೆಗೆ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೂ ಪಾಕಿಸ್ತಾನ ಸರ್ಕಾರ ಮಾತ್ರ ಈ ಗಡಿರೇಖೆಯ ಬಳಿ ಹೊರಠಾಣೆಗಳನ್ನು ನಿರ್ಮಿಸಿದ್ದಲ್ಲದೆ, ಹಲವು ಮಿಲಿಟರಿ ಕಟ್ಟಡಗಳನ್ನು ನಿರ್ಮಿಸಿತ್ತು. ಜತೆಗೆ, ಅಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಯೋಧರು ಬಲೂಚಿಸ್ತಾನಿಗಳ ಮೇಲೆ ಭಾರಿ ದೌರ್ಜನ್ಯ ಎಸಗುತ್ತಿದ್ದರು. ಇದೆಲ್ಲದರಿಂದ ಬೇಸತ್ತಿದ್ದ ಬಲೂಚಿಸ್ತಾನಿಗಳು ಇದೀಗ ಪಾಕ್ ಸೇನಾಪಡೆ ಮತ್ತು ಸರ್ಕಾರದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ.
ಕಳೆದ ವಾರ ಪಾಕ್ ಯೋಧರು ಈ ಪ್ರದೇಶದಲ್ಲಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಂದಿದ್ದರು. ಈ ಘಟನೆ ಬಗ್ಗೆ ಬಲೂಚಿಸ್ತಾನದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಲೂಚಿಸ್ತಾನಿಗಳು ಮತ್ತು ಬಲೂಚಿಸ್ತಾನ ನ್ಯಾಷನಲ್ ಪಾರ್ಟಿಯ (ಬಿಎನ್ಪಿ) ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖ್ತರ್ ಮೆಂಗಲ್ ಈ ಹತ್ಯೆಗೆ ಸ್ಥಳೀಯ ಆಡಳಿತವೇ ಹೊಣೆ ಎಂದು ಆರೋಪಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ದೇಶದ್ರೋಹದ ಆರೋಪಕ್ಕೆ ಒಳಗಾಗಿರುವ ಬೀದರ್ ಶಾಲೆಯಿಂದ ಸ್ವಚ್ಛತಾ ಅಭಿಯಾನ
ಸಾಯಿಸಿ, ಬಿಸಾಡು ತಂತ್ರ: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನಾಪಡೆಗಳು ತಮ್ಮ ವಿರುದ್ಧ ಮಾತನಾಡುವವರನ್ನು, ತಮ್ಮ ದೌರ್ಜನ್ಯಗಳ ವಿರುದ್ಧ ಸಿಡಿದೇಳುವವರನ್ನು ಸಾಯಿಸಿ, ಬಿಸಾಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.
ಕೆಲದಿನಗಳ ಹಿಂದೆ ಪಾಕ್ ವಿರುದ್ಧ ಸ್ವೀಡನ್ನಿಂದ ಪ್ರಕಟವಾಗುವ ಬಲೂಚಿಸ್ತಾನ ಟೈಮ್ಸ್ ಎಂಬ ಆನ್ಲೈನ್ ಪತ್ರಿಕೆಯ ಸಂಪಾದಕ ಸಾಜೀದ್ ಹುಸೇನ್ ಪಾಕಿಸ್ತಾನ ವಿರೋಧಿ ಲೇಖವನ್ನು ಪ್ರಕಟಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪಾಕ್ ಜನರು ಸ್ವೀಡನ್ನಲ್ಲಿದ್ದ ಸಾಜೀದ್ ಹುಸೇನ್ ಅವರನ್ನು ಮಾರ್ಚ್ 2ರಂದು ಅವರನ್ನು ಅಪಹರಿಸಿ, ಮೇ 2ರಂದು ಹತ್ಯೆ ಮಾಡಿದ್ದರು. ಅವರ ಶವವನ್ನು ಸ್ವೀಡನ್ನ ಉಪ್ಸಾಲಾ ಎಂಬ ನಗರದ ಹೊರವಲಯದಲ್ಲಿ ಬಿಸಾಡಿ ಹೋಗಿದ್ದರು ಎನ್ನಲಾಗಿದೆ. ಇದು ಕೂಡ ಪ್ರತಿಭಟನೆಯ ಕಾವಿಗೆ ತುಪ್ಪ ಸುರಿದಿದೆ ಎಂದು ಹೇಳಲಾಗುತ್ತಿದೆ.
ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!