ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ಕಳೆದ ವಾರ ನಡೆದ ಉಗ್ರರ ದಾಳಿಯಲ್ಲಿ ಒಬ್ಬ ಕರ್ನಲ್ ಸೇರಿ ಐವರು ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಮೇಲೆ ಪ್ರತ್ರೀಕಾರದ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಆತಂಕಗೊಂಡಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ವಾಯುಪಡೆಯ ವೈಮಾನಿಕ ಅಭ್ಯಾಸ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಿದೆ. ತನ್ಮೂಲಕ ವಾಯುಗಡಿಯ ಭದ್ರತೆಯನ್ನು ಹೆಚ್ಚಿಸಿದೆ.
ಪಾಕಿಸ್ತಾನದ ವಾಯುಪಡೆ ಸಿಬ್ಬಂದಿ ಈ ಮೊದಲೇ ವೈಮಾನಿಕ ಅಭ್ಯಾಸ ಆರಂಭಿಸಿದ್ದರು. ಈ ಬಗ್ಗೆ ಭಾರತಕ್ಕೆ ಮಾಹಿತಿಯನ್ನೂ ನೀಡಿದ್ದರು. ಆದರೆ ಹಂದ್ವಾರಾ ಉಗ್ರರ ದಾಳಿಯ ಬಳಿಕ ಭಾರತದಿಂದ ಪ್ರತಿಕಾರದ ದಾಳಿ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅದು ಅಭ್ಯಾಸದ ತೀವ್ರತೆಯನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ಈ ಕಾರ್ಯದಲ್ಲಿ ಅದು ಎಫ್ 16 ಮತ್ತು ಜೆಎಫ್-17 ಫೈಟರ್ಜೆಟ್ಗಳನ್ನು ಹೆಚ್ಚುಹೆಚ್ಚಾಗಿ ಬಳಸಲಾರಂಭಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೌಂಟ್ ಎವರೆಸ್ಟ್ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ
ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ನುಸುಳುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಅಣಕು ಧ್ವಜ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನುಮಾನ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಏನಾದರೂ ಅನಾಹುತ ಸೃಷ್ಟಿಸುವ ದುಸ್ಸಾಹಸ ತೋರಿದರೆ ಅದಕ್ಕೆ ಸರಿಯಾದ ಉತ್ತರ ನೀಡುವುದಾಗಿ ಭಾರತ ಸದಾ ಪಾಕಿಸ್ತಾನವನ್ನು ಎಚ್ಚರಿಸುತ್ತಲೇ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಗಡಿಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎನ್ನಲಾಗಿದೆ.