ಬೆಂಗಳೂರು: ಪ್ರೀತಿಸುವಂತೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಗೆ ಟಾರ್ಚರ್ ಕೊಡುತ್ತಿದ್ದ ಭಗ್ನ ಪ್ರೇಮಿಯನ್ನು ಚಂದ್ರಾಲೇಔಟ್ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ವಿದ್ಯಾರ್ಥಿನಿ ಕೊಟ್ಟ ದೂರಿನ ಆಧಾರದ ಮೇಲೆ ನಾಗರಬಾವಿ ನಿವಾಸಿ ರಾಜೇಶ್ (22)ನ್ನು ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಕಳೆದ 3 ವರ್ಷಗಳ ಹಿಂದೆ ದೂರುದಾರ ಯುವತಿಗೆ ರಾಜೇಶ್ ಪರಿಚಯವಾಗಿತ್ತು. ಕೆಲ ದಿನಗಳಿಂದ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ. ಈತನ ಪ್ರೇಮ ನಿವೇದನೆ ತಿರಸ್ಕರಿಸಿದಾಗ, ಬ್ಲೇಡ್ನಲ್ಲಿ ಕೈ, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದ. ಒಂದು ವೇಳೆ ನಾನು ಸತ್ತರೆ ನಿನ್ನ ಪಾಲಕರ ಹೆಸರನ್ನು ಬರೆದಿಡುತ್ತೇನೆ. ಆಗ ನೀವು ಜೈಲಿಗೆ ಹೋಗುತ್ತೀರಿ. ಅಪಹಾಸ್ಯ, ಅವಮಾನಕ್ಕೆ ಗುರಿಯಾಗಿ ಸಮಾಜದಲ್ಲಿ ನಿನ್ನನ್ನು ಯಾರೂ ಮದುವೆ ಮಾಡಿಕೊಳ್ಳಲು ಮುಂದೆ ಬರುವುದಿಲ್ಲ ಎಂದಿದ್ದ. ಸಾಲದಕ್ಕೆ ಯುವತಿ ಮನೆಗೆ ದೂರವಾಣಿ ಕರೆ ಮಾಡಿ ನಿಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ಪಾಲಕರಿಗೆ ಗಡುವು ನೀಡಿದ್ದ. ನಿನ್ನ ಕೆಲವು ಅಶ್ಲೀಲ ಫೋಟೊಗಳು ನನ್ನ ಬಳಿಯಿದ್ದು, ಇದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದ.
ಒಂದು ದಿನದ ಒಳಗಾಗಿ ಲವ್ ಪ್ರಪೊಸಲ್ ಒಪ್ಪಿಕೊಳ್ಳಬೇಕು ಎಂದು ಯುವತಿಗೆ ಡೆಡ್ಲೈನ್ ಕೊಟ್ಟಿದ್ದ. ಇದರಿಂದ ಆತಂಕಗೊಂಡ ಯುವತಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.