ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸುವ ಮೊದಲು, ಸಾಂವಿಧಾನಿಕವಾಗಿ ಸ್ವೀಕರಿಸಿರುವ ಪ್ರಮಾಣವಚನವನ್ನು ನೆನಪಿಸಿಕೊಳ್ಳಲಿ. ಇದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ಮರೆಯಬಾರದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಿನ್ನೆ ಟ್ವೀಟ್ ಮಾಡಿದ್ದರು.
ಇಂದು ಓವೈಸಿ ಅವರಿಗೆ ತೆಲಂಗಾಣ ಬಿಜೆಪಿ ನಾಯಕ ಕೃಷ್ಣ ಸಾಗರ್ ರಾವ್ ತಿರುಗೇಟು ನೀಡಿದ್ದಾರೆ. ಓವೈಸಿ ಅವರು ಸಂಸದನಾಗುವಾಗ ಸ್ವೀಕರಿಸಿದ ಪ್ರಮಾಣವಚನವನ್ನು ಅದೆಷ್ಟು ಬಾರಿ ಉಲ್ಲಂಘಿಸಿದ್ದಾರೆ ಎಂಬುದನ್ನು ಒಮ್ಮೆ ಲೆಕ್ಕ ಮಾಡಿಕೊಳ್ಳಲಿ. ಒಬ್ಬ ಸಂಸದನಾಗಿ ಎಲ್ಲರ ಪರವಾಗಿ ಕೆಲಸ ಮಾಡಬೇಕು. ಆದರೆ ಓವೈಸಿ ತನ್ನ ಧರ್ಮವನ್ನು ಮಾತ್ರ ಪ್ರತಿನಿಧಿಸುತ್ತಾರೆ. ಇದು ಜಾತ್ಯತೀತವೆನ್ನಿಸುತ್ತದೆಯಾ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ಓವೈಸಿ ಅವರು ತಮ್ಮ ಜಾತ್ಯಾತೀತ ಮನೋಭಾವವನ್ನು ಪ್ರದರ್ಶಿಸುವ ಸಲುವಾಗಿಯಾದರೂ ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಗೆ ನಮ್ಮನ್ನೂ ಆಹ್ವಾನಿಸಿ ಎಂದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್
ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ನರೇಂದ್ರ ಮೋದಿಯವರು ವೈಯಕ್ತಿಕ ಸಾಮರ್ಥ್ಯ ಹಾಗೂ ಒಬ್ಬ ಪ್ರಧಾನಮಂತ್ರಿ ಎರಡೂ ಕಾರಣದಿಂದ ಭಾಗವಹಿಸುತ್ತಿದ್ದಾರೆ. ಇದರಿಂದ ಯಾವುದೇ ನೈತಿಕ, ಕಾನೂನಾತ್ಮಕ, ಸಾಂವಿಧಾನಿಕ ತೊಂದರೆಯಾಗುವುದಿಲ್ಲ. ಓವೈಸಿಯಂಥವರು ಮಾಡುವ ಇಂಥ ಕಾಮೆಂಟ್ಗಳಿಗೆಲ್ಲ ಪ್ರಧಾನಿಯವರು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡುರುವ ತೀರ್ಪನ್ನು ಈ ದೇಶದ ಬಹುಪಾಲು ಮುಸ್ಲಿಮರು ಸ್ವೀಕರಿಸಿದ್ದು, ಓವೈಸಿಗೆ ಸಹಿಸಲಾಗುತ್ತಿಲ್ಲ ಎಂದೂ ವ್ಯಂಗ್ಯಮಾಡಿದ್ದಾರೆ. (ಏಜೆನ್ಸೀಸ್)
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ರಚನೆಯಾಯ್ತು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್…