ಗಾಂಧಿನಗರ: ಕುಸಿದು ಬಿದ್ದು, ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪ್ರಕರಣಗಳು ದೇಶಾದ್ಯಂತ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಗುಜರಾತ್ನಲ್ಲಿ ಕಳೆದ 6 ತಿಂಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಹೀಗೆ ಸತ್ತವರ ಪೈಕಿ ಶೇ. 80 ಮಂದಿ 11ರಿಂದ 25ರ ವಯಸ್ಸಿನವರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಸುಮಾರು 2 ಲಕ್ಷ ಶಾಲಾಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರಿಗೆ ಕಾರ್ಡಿಯೊ ಪಲ್ಮನರಿ ರಿಸಸಿಟೇಷನ್ (ಸಿಪಿಆರ್) ಕೈಗೊಳ್ಳಲು ತರಬೇತಿ ನೀಡಲಾಗುತ್ತದೆ. ಈ ಮೂಲಕ ಹೃದಯಾಘಾತದಿಂದ ಸಾಯುವವರನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಕುಬೇರ್ ದಿಂಡೋರ್ ತಿಳಿಸಿದ್ದಾರೆ.
ಆತಂಕದ ಬದುಕು
ರಾಜ್ಯದಲ್ಲಿ 108 ಆ್ಯಂಬುಲೆನ್ಸ್ಗಳಿಗೆ ಹೃದಯಾಘಾತಕ್ಕೆ ಸಂಬಂಧಿಸಿದ ಕರೆಗಳು ಪ್ರತಿದಿನ ಸರಾಸರಿ 173 ಬರುತ್ತಿವೆ. ಸಾಯುತ್ತಿರುವವರಲ್ಲಿ ಚಿಕ್ಕ ವಯಸ್ಸಿನವರೇ ಅಧಿಕ ಇರುವುದರಿಂದ ಮಕ್ಕಳು& ಯುವಕರು ಆತಂಕದಲ್ಲಿದ್ದಾರೆ. ಕ್ರಿಕೆಟ್ ಆಡುವಾಗ ಇಲ್ಲವೇ ಗರ್ಬಾ ಕುಣಿತದ ವೇಳೆ ಹೇಗೆ ಜನರು ಬಿದ್ದು ಸತ್ತರು ಎಂಬುದನ್ನು ಕಳೆದ ಆರೇಳು ತಿಂಗಳಲ್ಲಿ ನಾವೆಲ್ಲರೂ ಕಂಡಿದ್ದೇವೆ. ಶಿಕ್ಷಕರು ಸಿಪಿಆರ್ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ನೆರವಾಗಬೇಕು ಎಂದು ಸಚಿವ ಕುಬೇರ್ ತಿಳಿಸಿದ್ದಾರೆ.