ನವದೆಹಲಿ: ಅಧಿಕಾರದಲ್ಲಿ ಉಳಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಿಂದೂಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರದ ಕನ್ಯಾರ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಅಬ್ದುಲ್ಲಾ, ಮೋದಿಯ ಈ ಒಡೆದು ಆಳುವ ರಾಜಕೀಯದಿಂದ ಜನರು ದೂರವಿರಬೇಕು. ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಐಪಿಎಲ್ ಉತ್ತಮ ವೇದಿಕೆ; ಮಾಜಿ ಕ್ರಿಕೆಟಿಗ ಹೀಗೆನ್ನಲು ಕಾರಣವೇನು?
ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಮೋದಿ ಹಿಂದೂಗಳಲ್ಲಿ ಮುಸ್ಲಿಮರ ಬಗ್ಗೆ ದ್ವೇಷವನ್ನ ಹುಟ್ಟು ಹಾಕುತ್ತಿದ್ದಾರೆ. ವಿರೋಧ ಪಕ್ಷದವರು ಮುಸ್ಲಿಮರಿಗೆ ಹಣ ನೀಡಲು ನಿಮ್ಮ ಮಂಗಳಸೂತ್ರಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ ಎಂದು ಹೇಳುವ ಮೂಲಕ ಹಿಂದೂಗಳಲ್ಲಿ ಮೋದಿ ಭಯ ಸೃಷ್ಟಿಸುತ್ತಿದ್ದಾರೆ.
ನಾವು ನಮ್ಮ ತಾಯಿ ಮತ್ತು ಸಹೋದರಿಯರಿಂದ ಮಂಗಳಸೂತ್ರಗಳನ್ನು ಕಸಿದುಕೊಳ್ಳುವಷ್ಟು ಕೆಟ್ಟ ಜನರಲ್ಲ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ. ದೇವರು ಮಕ್ಕಳನ್ನು ಕೊಡುತ್ತಾನೆ. ಅನೇಕ ಜನರಿಗೆ ಮಕ್ಕಳೇ ಆಗುವುದಿಲ್ಲ. ಮೋದಿಗೆ ಮಕ್ಕಳಿಲ್ಲದಿರುವಾಗ ಈ ಬಗ್ಗೆ ಅವರಿಗೆ ಏನು ಗೊತ್ತು. ತನ್ನ ಹೆಂಡತಿಯನ್ನು ಗೌರವಿಸದ ಮನುಷ್ಯ ಮಕ್ಕಳನ್ನು ಹೇಗೆ ಗೌರವಿಸುತ್ತಾರೆ ಎಂದು ಫಾರೂಕ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.