ಬೆಂಗಳೂರು: ಈದ್ ಉಲ್ ಫಿತ್ರ್ ಹಬ್ಬದ ಸಂದರ್ಭದಲ್ಲಾದರೂ ಮುಸ್ಲಿಮರಿಗೆ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮನವಿ ಮಾಡಿರುವುದಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
‘‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮತ್ತು ಶಾಸಕ ಜಮೀರ್ ಅಹ್ಮದ್ ಈಗಾಗಲೇ ತಬ್ಲಿಘಿಗಳಿಗೆ ಬೆಂಬಲ ನೀಡಿ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ’’ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಇಬ್ರಾಹಿಂ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿರಸ್ಕರಿಸಬೇಕು ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿರಿ ಪಾಕ್ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!
‘‘ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಸರಿಸಮನಾಗಿ ಪರಿಪಾಲಿಸಬೇಕು. ಕಾನೂನಿನ ದೃಷ್ಟಿಯಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ’’ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಈದ್ ಉಲ್ ಫಿತ್ರ್ ಹಬ್ಬ ಮೇ 24 ಅಥವಾ 25ರಂದು ರಾಜ್ಯದಲ್ಲಿ ಆಚರಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿಗೆ ಇಬ್ರಾಹಿಂ ಪತ್ರ ಬರೆದಿದ್ದರು.
ಕರೊನಾ ಹಾವಳಿ ನಿಯಂತ್ರಣಕ್ಕಾಗಿ ಎಲ್ಲರೂ ಮನೆಯಲ್ಲೇ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ಸರ್ಕಾರ ನೀಡಿದ್ದ ಆದೇಶವನ್ನು ಮುಸ್ಲಿಮರು ಪಾಲಿಸುತ್ತ ಬಂದಿದ್ದಾರೆ. ಈಗ ಹಬ್ಬ ಸಮೀಪಿಸಿರುವುದರಿಂದ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿ ಹಬ್ಬದ ದಿನ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಆ ಪತ್ರದಲ್ಲಿ ಇಬ್ರಾಹಿಂ ಕೋರಿದ್ದರು.
ಇದನ್ನೂ ಓದಿರಿ 700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!