ನವದೆಹಲಿ: ಪಾಕಿಸ್ತಾನದ ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆ ಬಳಿಯ ಗಡಿ ನಿಯಂತ್ರಣ ರೇಖೆಯ ಸಮೀಪ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಗಡಿಭಾಗದ ಗ್ರಾಮಸ್ಥರೊಬ್ಬರಿಗೆ ಗಂಭೀರ ಗಾಯಗಳಾಗಿವೆ.
ಭದ್ರತಾ ಪಡೆ ಅಧಿಕಾರಿಗಳು ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಬುಧವಾರ ತಡರಾತ್ರಿ ಪಾಕ್ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ತಾರ್ಕುಂಡಿ ವಲಯದಲ್ಲಿ ಭಾರಿ ಶೆಲಿಂಗ್ ದಾಳಿ ಸಂಘಟಿಸಿದ್ದರು. ಈ ದಾಳಿಯ ವೇಳೆ ಗಡಭಾಗದಲ್ಲಿ ಪಹರೆ ಕಾಯುತ್ತಿದ್ದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ವಿವರಿಸಿದ್ದಾರೆ.
ಗಡಿ ಭಾಗದಲ್ಲಿರುವ ರಾಜಧಾನಿ ಎಂಬ ಗ್ರಾಮದ ನಿವಾಸಿ ನಯಾಮುತ್ತಲ್ಲಾ (35) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕ್ ಯೋಧರು ಮಾರ್ಟರ್ ಶೆಲ್ ದಾಳಿ ನಡೆಸಿದ್ದು, ಅದರ ತುಂಡುಗಳು ಇವರ ದೇಹವನ್ನು ಹೊಕ್ಕಿವೆ. ಇವರ ಬಲ ಭುಜವನ್ನು ಹೊಕ್ಕಿದ್ದ ಈ ತುಂಡುಗಳನ್ನು ಲಘುಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬಲೂಚಿಸ್ತಾನದಿಂದ ಪೇರಿ ಕಿತ್ತ ಪಾಕಿಸ್ತಾನ ಸೇನಾಪಡೆ, ಮಿಲಿಟರಿ ಕಟ್ಟಡಗಳಿಗೆ ಬೆಂಕಿ
ಬದ್ಗಾಂನಲ್ಲಿ ಕಾರ್ಯಾಚರಣೆ: ಗುರುವಾರ ಮುಂಜಾವಿನಲ್ಲಿ ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಬದ್ಗಾಂನ ಪಠಾಣ್ಪೋರಾ ಗ್ರಾಮದಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಮನೆಯೊಂದರಲ್ಲಿ ಅಡಗಿಕೊಂಡಿರುವ ಸುಳಿವಿನ ಮೇರೆಗೆ ಭದ್ರತಾಪಡೆ ಸಿಬ್ಬಂದಿ ಆ ಮನೆಯನ್ನು ಸುತ್ತುವರೆದಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲು ಉಗ್ರರು ಗುಂಡಿನ ದಾಳಿ ನಡೆಸಿದ್ದಾಗಿ ಹೇಳಲಾಗಿದೆ.
ಕಳೆದ ಭಾನುವಾರದಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಭದ್ರತಾಪಡೆಯ ನಾಲ್ಕನೇ ಕಾರ್ಯಾಚರಣೆ ಇದಾಗಿದೆ. ಇದಕ್ಕೂ ಮುನ್ನ ಶೋಫಿಯಾನ್ ಜಿಲ್ಲೆಯಲ್ಲಿ ಮೂರು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!