ಹಿರೇಬಾಗೇವಾಡಿ: ಇಲ್ಲಿನ ಹಿರೇಬಾಗೇವಾಡಿ-ಬೈಲಹೊಂಗಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರದ ವೇಳೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಈಚೆಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಸಮಾಜ ಸೇವಕ ಬಾಪು ನಾವಲಗಟ್ಟಿ ಮತ್ತು ನಿವೃತ್ತ ಅಂಚೆ ಪೇದೆ ದಯಾನಂದ ಹುಲಮನಿ ಮಾತನಾಡಿ, ಇಲ್ಲಿನ ಬಸವೇಶ್ವರ ವೃತ್ತದಿಂದ ಅರಳೀಕಟ್ಟಿ ಕ್ರಾಸ್ವರೆಗಿನ ರಸ್ತೆಯಲ್ಲಿ ಕೆಲ ವಾಹನ ಮಾಲೀಕರು ತಮ್ಮ ಭಾರಿ ಹಾಗೂ ಲಘು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿದ್ದಾರೆ.
ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಗಾಂಧಿನಗರ ವ್ಯಾಪ್ತಿಯಲ್ಲಿ ರಸ್ತೆಗೆ ವೇಗ ನಿಯಂತ್ರಕ ಇಲ್ಲದಿರುವುದರಿಂದ ಪದೇ ಪದೆ ಅಪಘಾತ ಸಂಭವಿಸಿ ಹಲವರ ಜೀವ ಹಾನಿಯಾಗಿದೆ ಎಂದು ತಿಳಿಸಿದರು. ಕೆಲ ಅಂಗಡಿಕಾರರು ಫುಟ್ಪಾಥ್ ಅತಿಕ್ರಮಿಸಿಕೊಂಡಿರುವುದರಿಂದ ಹಾಗೂ ಅನಗತ್ಯವಾಗಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿರುವುದರಿಂದ ವಾಹನ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಈ ಬಗ್ಗೆ ವಾಹನ ಮಾಲೀಕರಿಗೆ ಎಷ್ಟೋ ಸಲ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಈ ರಸ್ತೆಗೆ ಹೊಂದಿಕೊಂಡು ಪ್ರಾಥಮಿಕ ಶಾಲೆಯೂ ಇದ್ದು, ಸದ್ಯ ಶಾಲೆ ಮಕ್ಕಳು ಓಡಾಡುತ್ತಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ವೇಗತಡೆ ನಿರ್ಮಿಸುವಂತೆ ಸಂಬಂಧಿತರಿಗೆ ಎಷ್ಟೋ ಸಲ ಹೇಳಿದ್ದರೂ ಸ್ಪಂದಿಸುತ್ತಿಲ್ಲ. ಈ ಎಲ್ಲ ಸಮಸ್ಯೆ ಕೂಡಲೇ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮನವಿ ಸ್ವೀಕರಿಸಿದ ಪಿಎಸ್ಐ ಅಯೂಬಖಾನ ಪಠಾಣ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜೆಡಿಎಸ್ ವಕ್ತಾರ ಶ್ರೀಶೈಲ ಫಡಗಲ್ಲ, ಬಾಪು ನಾವಲಗಟ್ಟಿ, ದಯಾನಂದ ಹುಲಮನಿ, ಶಿವಪುತ್ರ ಹಳೇಮನಿ, ರಾಹುಲ ನಿಲಜಿ, ಶಿವಮೊಗ್ಗಿ ಗೋಣಿ, ಚನ್ನಪ್ಪ ಕುಂಬಾರ, ಸಿದ್ದಪ್ಪ ಹುಕ್ಕೇರಿ, ಪಡಿಗೌಡ ಹಾದಿಮನಿ, ರಮೇಶ ಹಿರೇಮಠ, ಸುನೀಲ ಕುಂಬಾರ ಇತರರು ಇದ್ದರು.