ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್ ಗೆದ್ದು ಬೀಗಿದ್ದು, ಫೈನಲ್ ಪ್ರವೇಶಿಸಿದೆ. ಇತ್ತ ಕೋಲ್ಕತ ಫೈನಲ್ ಪ್ರವೇಶಿಸುತ್ತಿದ್ದಂತೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮೆಂಟರ್ ಗೌತಮ್ ಗಂಭೀರ್ರನ್ನು ಹಾಡಿ ಹೊಗಳುತ್ತಿದ್ದು, ತಂಡವನ್ನು ಮುನ್ನಡೆಸಿದ ರೀತಿಗೆ ಹಲವರು ಪ್ರಶಂಶಿಸಿದ್ದಾರೆ.
ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಿ ಕಳೆದ ವರ್ಷದವರೆಗೆ ಲಖನೌ ಸೂಪರ್ಜೈಂಟ್ಸ್ (ಎಲ್ಎಸ್ಜಿ) ತಂಡದ ಮೆಂಟರ್ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸಿದರು. ಸುನೀಲ್ ನಾರಾಯಣ್ ಅವರನ್ನು ಆರಂಭಿಕರಾಗಿ ಕಳುಹಿಸುವುದು ಮತ್ತು ಸತತ ವೈಫಲ್ಯಗಳ ನಡುವೆಯೂ ಮಿಚೆಲ್ ಸ್ಟಾರ್ಕ್ ಅವರನ್ನು ಮುಂದುವರಿಸುವುದು ಮುಂತಾದ ಅವರ ನಿರ್ಧಾರಗಳಿಂದ ತಂಡವು ಸತತ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ.
ಗೌತಮ್ ಗಂಭೀರ್ ಕೆಕೆಆರ್ ಮೆಂಟರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದು, 17ನೇ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಹಾಗೂ 14ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಈ ಬಾರಿಯೂ ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ದೇವೇಗೌಡರ ಮೇಲೆ ಅಭಿಮಾನ ಇದ್ದರೆ 48 ಗಂಟೆಯೊಳಗೆ ಶರಣಾಗು: ಎಚ್.ಡಿ. ಕುಮಾರಸ್ವಾಮಿ
ಇನ್ನೂ ಪಂದ್ಯ ಶುರುವಾಗುವುದಕ್ಕೂ ಮುನ್ನ ಗೌತಮ್ ಗಂಭೀರ್ ಆಡಿದ್ದಾರೆ ಎನ್ನಲಾದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಭೀರ್ ಆಡಿರುವ ಈ ಮಾತುಗಳೇ ಕೆಕೆಆರ್ ಯಶಸ್ವಿಯಾಗಿ ಫೈನಲ್ ಪ್ರವೇಶಿಸಲು ಸ್ಫೂರ್ತಿ ನೀಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಈ ವಿಡಿಯೋ ಮಾಡಲಾಗಿದ್ದು, ಈಗ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಐಪಿಎಲ್ನಲ್ಲಿ ನೀವು ಅತ್ಯಂತ ಯಶಸ್ವಿ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದೀರಾ. ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಎಲ್ಲಾ ಆಟಗಾರರನ್ನು ಸಮಾನವಾಗಿ ನೋಡಲಾಗುವುದು. ನಾವು ಇಂದಿನಿಂದ ಅಭಿಯಾನವನ್ನು ಆರಂಭಿಸುತ್ತೇವೆ. ನೀವು ದೈಹಿಕವಾಗಿ, ಮಾನಸಿಕವಾಗಿ, ಬುದ್ಧಿವಂತಿಕೆಯಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿ. ನೀವು ಒಂದು ಯಶಸ್ವಿ ಫ್ರಾಂಚೈಸ್ಅನ್ನು ಪ್ರತಿನಿಧಿಸುತ್ತಿದ್ದೀರಾ. ನೀವು ಮೈದಾನದಲ್ಲಿ ಆಡುವಾಗ ಆ ಮನೋಭಾವದೊಂದಿಗೆ ಕಣಕ್ಕಿಳಿಯಿರಿ. ನಾನು ಸಂಪೂರ್ಣವಾಗಿ ನಂಬುವ ಒಂದು ವಿಷಯವೆಂದರೆ ಆಟಗಾರರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡುವುದು. ಏಕೆಂದರೆ ಇದು ಮುಖ್ಯ ವಿಚಾರವಾಗಿದ್ದು, ನನ್ನ ಜೊತೆ ಆಡಿರುವ ಬಹುತೇಕರು ಈ ವಿಚಾರವನ್ನು ತಿಳಿದಿರುತ್ತಾರೆ. ಎಂದು ಗೌತಮ್ ಗಂಭೀರ್ ಹೇಳಿರುವ ವಿಡಿಯೋ ಟ್ರೆಂಡ್ ಆಗಿದೆ.
ಕೋಲ್ಕತ ನೈಟ್ರೈಡರ್ಸ್ ತಂಡವು ಇದುವರೆಗೆ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದು, ಎರಡರಲ್ಲಿ ಗೆದ್ದು (2012, 2014) 2021ರಲ್ಲಿ ಸೋಲು ಕಂಡಿತ್ತು. 17ನೇ ಆವೃತ್ತಿಯಲ್ಲೂ ಫೈನಲ್ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುತ್ತ ಎಂದು ಕಾದು ನೋಡಬೇಕಿದೆ.