ನವದೆಹಲಿ: ಶತಾಯಗತಾಯ ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಹೋರಾಡುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸುವ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ. ಆದರೆ, ಅವರ ಈ ತಂತ್ರಗಾರಿಕೆಗೆ ರಾಷ್ಟ್ರದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರಿಂದ ಪೂರಕ ಬೆಂಬಲ ವ್ಯಕ್ತವಾಗಿಲ್ಲ ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಅಧ್ಯಕ್ಷರನ್ನು ಭೇಟಿಯಾಗಿದ್ದ ಕೆ.ಪಿ. ಶರ್ಮ ಓಲಿ, ರಾಷ್ಟ್ರದಲ್ಲಿ ಕೋವಿಡ್-19 ಪಿಡುಗು ಜೋರಾಗಿದೆ. ಆದ್ದರಿಂದ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು ಅನುಮತಿ ಕೋರಿದರು ಎನ್ನಲಾಗಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಬಿದ್ಯಾ ದೇವಿ ಭಂಡಾರಿ, ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಇತರೆ ನಾಯಕರೊಂದಿಗೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಕೆ.ಪಿ. ಶರ್ಮ ಓಲಿಗೆ ಸಲಹೆ ನೀಡಿದರು ಎನ್ನಲಾಗಿದೆ.
ರಾಷ್ಟ್ರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದರೆ, ತಮ್ಮ ವಿರುದ್ಧ ಎದ್ದಿರುವ ಬಂಡಾಯದ ಬಿರುಗಾಳಿಯನ್ನು ತಕ್ಕಮಟ್ಟಿಗೆ ಶಮನ ಮಾಡಬಹುದು ಎಂಬುದು ಓಲಿ ಚಿಂತನೆಯಾಗಿದೆ. ಆದರೆ, ಅವರ ಈ ತಂತ್ರಗಾರಿಕೆಗೆ ಪೂರಕವಾಗಿ ಸ್ಪಂದಿಸಲು ಯೋಧರನ್ನು ನಿಯೋಜಿಸುವ ಬಗ್ಗೆ ನೇಪಾಳ ಸೇನಾಪಡೆ ಕೂಡ ಒಲವು ಹೊಂದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತ-ಅಮೆರಿಕ ಆಯುರ್ವೇದ ವೈದ್ಯರಿಂದ ಜಂಟಿಯಾಗಿ ಕೋವಿಡ್-19 ಔಷಧ ಪರೀಕ್ಷೆ
ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಸಹಅಧ್ಯಕ್ಷರಾಗಿರುವ ಪಿ.ಕೆ. ದಹಾಲ್ ಅವರೊಂದಿಗೆ ಬುಧವಾರ ಎರಡು ಸುತ್ತಿನ ಮಾತುಕತೆ ನಡೆಸಿದ ಓಲಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸಿದರು. ಆದರೆ ಅವರ ಈ ಪ್ರಯತ್ನ ಸಫಲವಾಗಿಲ್ಲ. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ಗುರುವಾರವೂ ಮಾತುಕತೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಕಾಠ್ಮಂಡುವಿನಲ್ಲಿ ಮುಂದುವರಿದಿರುವ ಗಲ್ಲಾ (ಯುದ್ಧ) ಮತ್ತು ಗಾದಿ (ಅಧಿಕಾರ) ನಡುವಿನ ಜಟಾಪಟಿಯನ್ನು ಇತ್ಯರ್ಥಪಡಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾಡಲು ನೇಪಾಳದಲ್ಲಿನ ಚೀನಾದ ರಾಯಭಾರಿ ಹೌ ಯಾಂಕಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಎಲ್ಲ ಬಣಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.