ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ ಬಳಿಯ ಕುತ್ತೆತ್ತೂರು ಪರಿಸರದಲ್ಲಿ ತೈಲ ಮಿಶ್ರಿತ ನೀರು ಹರಿಯುತ್ತಿದ್ದು, ಕಚ್ಚಾ ತೈಲ ಸೋರಿಕೆ ಶಂಕೆ ವ್ಯಕ್ತವಾಗಿದೆ. ಇದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ತೋಕೂರು-ಪಾದೂರು ನಡುವೆ ಅಳವಡಿಸಲಾದ ಕಚ್ಚಾ ತೈಲ ಕೊಳವೆ ಮಾರ್ಗದ ಬದಿ ಮಂಜಯ್ಯ ಶೆಟ್ಟಿ ಅವರ ಜಾಗದಲ್ಲಿ ತೈಲ ಮಿಶ್ರಿತ ನೀರು ಹರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಇಂಡಿಯನ್ ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್(ಐಎಸ್ಆರ್ಪಿಎಲ್)ಗೆ ಮಾಹಿತಿ ನೀಡಿದ್ದಾರೆ.
ಅಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ತೈಲ ಸೋರಿಕೆಯಾಗಿಲ್ಲ. ಇದು ಕಚ್ಚಾ ತೈಲ ಅಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ.
ಐಎಸ್ಆರ್ಪಿಎಲ್ ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತೈಲ ಸೋರಿಕೆಯಾಗಿ ನೀರಿನೊಂದಿಗೆ ಹರಿದು ಬರುತ್ತಿದೆ. ಇದು ನದಿ, ಕುಡಿಯುವ ನೀರಿನ ಬಾವಿ, ಕೃಷಿ ಭೂಮಿಗೆ ಸೇರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ತೈಲ ಕೊಳವೆ ಮಾರ್ಗ ಮಾಡುವುದಕ್ಕೆ ಸ್ಥಳೀಯರು ಹಿಂದೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.