ಮಂಗಳೂರು: ವಿದ್ಯಾರ್ಥಿಗಳಿಗೆ ತಮ್ಮ ಕಠಿಣ ಅಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಏಕಾಗ್ರತೆ ಅತ್ಯಗತ್ಯವಾಗಿದ್ದು, ಸರಳ ತಂತ್ರಗಳ ಮೂಲಕ ಮನಸ್ಸಿನ ಏಕಾಗ್ರತೆ ಮತ್ತು ದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಹೇಳಿದರು.
ಗೋವಿಂದ ದಾಸ ಕಾಲೇಜಿನ ರೋಟರಾಕ್ಟ್ ಕ್ಲಬ್ ಹಾಗೂ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಆಡಳಿತ ಶಾಸ್ತ್ರ ವಿಭಾಗ ಮತ್ತು ರೋಟರಿ ಕ್ಲಬ್ ಸುರತ್ಕಲ್ನ ಆಶ್ರಯದಲ್ಲಿ ನಡೆದ ಮೈಂಡ್ ಮ್ಯಾಜಿಕ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಂತ್ರ ಅಗತ್ಯವಾಗಿ ತಿಳಿದುಕೊಳ್ಳಬೇಕು. ಈ ಮೂಲಕ ಶಿಕ್ಷಣ, ಜ್ಞಾನಾರ್ಜನೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, ಮನಸ್ಸಿನ ಏಕಾಗ್ರತೆಯ ವಿಧಾನಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಲಿಕೆಯಲ್ಲಿ ಸಾಕರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಎಂದರು.
ಸುರತ್ಕಲ್ ರೋಟರಿ ಕ್ಲಬ್ನ ಅಧ್ಯಕ್ಷ ಯೋಗೀಶ್ ಕುಳಾಯಿ, ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ್ ಕೆ., ರೋಟರಾಕ್ಟ್ ಕ್ಲಬ್ ಸಂಯೋಜಕಿ ಶಿಲ್ಪಾರಾಣಿ ಕೆ., ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸಂಘದ ಸಂಯೋಜಕಿ ಡಾ. ಭಾಗ್ಯಲಕ್ಷ್ಮಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ರೋಟರಾಕ್ಟ್ ಕ್ಲಬ್ನ ಅಧ್ಯಕ್ಷೆ ದಿಶಾ, ಸುರತ್ಕಲ್ ರೋಟರಿ ಕ್ಲಬ್ನ ಕಾರ್ಯದರ್ಶಿ ರಮೇಶ್ ರಾವ್ ಎಂ. ಮತ್ತು ನಿರ್ದೇಶಕ ಮೋಹನ್ ಉಪಸ್ಥಿತರಿದ್ದರು. ಪಲ್ಲವಿ ನಿರೂಪಿಸಿದರು. ಹಿತಾ ಉಮೇಶ್ ವಂದಿಸಿದರು.