ತಿರುವನಂತಪುರಂ: ಡಿಪ್ಲೊಮ್ಯಾಟಿಕ್ ಬ್ಯಾಗೇಜ್ನಲ್ಲಿ ಯುಎಇಯಿಂದ ಕೇರಳಕ್ಕೆ 30 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಳೆನ್ನಲಾದ, ಈಗ ತಲೆಮರೆಸಿಕೊಂಡಿರುವ ಕೇರಳ ಐಟಿ ಇಲಾಖೆಯ ಕಾರ್ಯಾಚರಣೆ ಅಧಿಕಾರಿ ಸ್ವಪ್ನಾ ಸುರೇಶ್ ಕುರಿತು ರೋಚಕ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ.
ಸ್ವಪ್ನಾ ಮತ್ತು ಆಕೆಯ ಗ್ಯಾಂಗ್ನವರು ‘ಹೇಗೂ ಮಾಡ್ತೀವಿ, ಸಣ್ಣಪುಟ್ಟ ಸ್ಮಗ್ಲಿಂಗ್ ಯಾಕೆ ಮಾಡಬೇಕು’ ಅಂತ ಯೋಚಿಸಿದ್ದರೋ ಏನೋ! ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಇವರ ಗೋಲ್ಡ್ ಸ್ಮಗ್ಲಿಂಗ್ ಹಲವಾರು ಕಿಲೋಗಳ ಲೆಕ್ಕದಲ್ಲೇ ಇರುತ್ತಿತ್ತು. ಈ ಕಳ್ಳಸಾಗಣೆಗೆ ಇವಳೇ ಮಾಸ್ಟರ್ ಬ್ರೇನ್ ಆಗಿದ್ದರಿಂದ ಒಂದು ವ್ಯವಹಾರಕ್ಕೆ ಕನಿಷ್ಠ 25ರಿಂದ 35 ಲಕ್ಷ ರೂ.ವರೆಗೆ ಈಕೆ ಸಂಭಾವನೆ ಪಡೆಯುತ್ತಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: 30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ
ಅದೇ ಇಲಾಖೆಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಎಂಬಾತ ಈ ದಂಧೆಯಲ್ಲಿ ಈಕೆಗೆ ಸಹಕಾರ ನೀಡುತ್ತಿದ್ದ. ಒಂದರ್ಥದಲ್ಲಿ ಇವರಿಬ್ಬರೂ ಇದರಲ್ಲಿ ಪಾಲುದಾರರು. ಆದರೆ ಆತನಿಗೆ ಸಣ್ಣ ಪಾಲು ಸಿಗುತ್ತಿತ್ತು. ಆದರೂ ಆತನ ಬಗ್ಗೆ ಸ್ವಪ್ನಾ ಅಪಾರ ಪ್ರೀತಿ-ವಿಶ್ವಾಸ ಹೊಂದಿದ್ದಳು. ಪತಿಯಿಂದ ವಿಚ್ಛೇದನ ಪಡೆದಿರುವ ಈಕೆ ಒಬ್ಬಳೇ ಫ್ಲಾೃಟ್ನಲ್ಲಿ ಇರುತ್ತಿದ್ದುದರಿಂದ ಸರಿತ್ ಕೂಡ ಹೆಚ್ಚಿನ ಸಮಯ ಅದೇ ಫ್ಲಾೃಟ್ನಲ್ಲಿ ಸಮಯ ಕಳೆಯುತ್ತಿದ್ದ. ಅಪಾರ್ಟ್ಮೆಂಟ್ನಲ್ಲಿರುವ ಬಹುತೇಕ ಜನ ಇವರಿಬ್ಬರೂ ದಂಪತಿ ಎಂದೇ ಭಾವಿಸಿದ್ದರು ಎನ್ನಲಾಗಿದೆ.
ಇದಲ್ಲದೆ, ಐಟಿ ಇಲಾಖೆಯ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಶಿವಶಂಕರ್ ಕೂಡ ಪ್ರತಿ ಶನಿವಾರ ಮತ್ತು ಭಾನುವಾರ ಈ ಫ್ಲಾೃಟ್ಗೆ ಹಾಜರಿ ಹಾಕುತ್ತಿದ್ದ. ಆಗಾಗ ತನ್ನ ಅಧಿಕಾರಿ ಸ್ನೇಹಿತರನ್ನೂ ಕರೆತರುತ್ತಿದ್ದ. ಅಲ್ಲಿ ರಾತ್ರಿಪೂರ್ತಿ ಪಾರ್ಟಿ ನಡೆಯುತ್ತಿದ್ದವು. ಅಪಾರ್ಟ್ಮೆಂಟ್ನ ಜನ ಇದರಿಂದ ರೋಸಿ ಹೋಗಿದ್ದರು. ಹಲವು ಬಾರಿ ಸ್ವಪ್ನಾ ಜತೆ ಜಗಳ ಮಾಡಿದ್ದರು. ಒಮ್ಮೆ ಶಿವಶಂಕರ್ ಇದ್ದಾಗಲೇ ಜಗಳ ನಡೆದಿತ್ತು. ಆತನೂ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಆ ಜಗಳ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ಆದರೆ ಕೇಸ್ನಲ್ಲಿ ಭಾಗಿಯಾಗಿದ್ದವರೆಲ್ಲರೂ ಪ್ರಭಾವಿಗಳಾಗಿದ್ದರಿಂದ ಪೊಲೀಸರು ಅದನ್ನು ಅಲ್ಲೇ ಮುಗಿಸಿ ಕೈತೊಳೆದುಕೊಂಡಿದ್ದರು. ಈಗ ಸ್ಮಗ್ಲಿಂಗ್ ಕೇಸ್ನಲ್ಲಿ ಸರಿತ್ ಬಂಧನವಾಗಿದ್ದು, ಶಿವಶಂಕರ್ ತಲೆದಂಡವಾಗಿದೆ. ಸ್ವಪ್ನಾ ಮಾತ್ರ ಕಣ್ಮರೆಯಾಗಿದ್ದಾಳೆ!
ಕುತೂಹಲ ಮೂಡಿಸುತ್ತಿದ್ದಾಳೆ ‘ಚಿನ್ನದ ರಾಣಿ’: ಐಎಎಸ್ ಅಧಿಕಾರಿ ತಲೆದಂಡ!