ನವದೆಹಲಿ: ದೇಶದೆಲ್ಲೆಡೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ರಾಜ್ಯ ಸರ್ಕಾರಗಳು ತಮ್ಮ ವಿವೇಚನೆ ಮೇರೆಗೆ ಘೋಷಿಸುತ್ತಿವೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯದ್ದು ಎನ್ನಲಾದ ಸುತ್ತೋಲೆಯೊಂದು ಶುಕ್ರವಾರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಮಾರ್ಚ್ 13ರ ಈ ಸುತ್ತೋಲೆಯಲ್ಲಿ ಯಾವುದೇ ಕೆಲಸದ ಸ್ಥಳದಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇದ್ದರೆ ಅಂತಹ ಕೇಂದ್ರಗಳು, ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ಒಂದು ವಾರ ಕಡ್ಡಾಯ ರಜೆ ಕೊಡಬೇಕು. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಇದು ಅನ್ವಯ ಎಂಬ ಒಕ್ಕಣೆ ಇದೆ.
ಅಲ್ಲದೆ, ಮಾರ್ಚ್ 14ರಿಂದ 21ರ ತನಕ ರಜೆ ಘೋಷಿಸರ್ಲಾಗಿದೆ. ಈ ಆದೇಶ ಉಲ್ಲಂಘಿಸಿದವರಿಗೆ 5,000 ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನೂ ಹೊಂದಿದೆ. ಆಸಕ್ತಿದಾಯಕ ವಿಚಾರ ಎಂದರೆ, ಅಧೀನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಹೆಸರು ರಾಜೇಂದ್ರ ಕುಮಾರ್ ಆಗಿದೆ. ಅದೇ ರೀತಿ ಗುಜರಾತ್ ಎಂಬುದರಲ್ಲೂ ಸ್ಪೆಲ್ಲಿಂಗ್ ಮಿಸ್ಟೇಕ್ ಕಂಡುಬಂದಿದೆ.
ಈ ಸುತ್ತೋಲೆ ಕೇಂದ್ರ ಆರೋಗ್ಯ ಸಚಿವಾಲಯದ ಗಮನಕ್ಕೂ ಬಂದಿದ್ದು, ಕೂಡಲೇ ಅದಕ್ಕೆ ಸ್ಪಷ್ಟೀಕರಣವನ್ನೂ ನೀಡಿದೆ. ಇದರಂತೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆಫೀಸ್ ಮೆಮೋರಂಡಂ ನಕಲಿಯಾಗಿದ್ದು, ಅಂತಯ ಯಾವುದೇ ಮೆಮೋವನ್ನು ಆರೋಗ್ಯ ಸಚಿವಾಲಯ ಪ್ರಕಟಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪರಿಸ್ಥಿತಿಯ ಲಾಭ ಪಡೆಯಲು ಯಾರೋ ದುಷ್ಕರ್ಮಿಗಳು ಮಾಡಿದ ಕೆಲಸವದು. ಸೈಬರ್ ಅಪರಾಧದ ವ್ಯಾಪ್ತಿಗೆ ಇದು ಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ. (ಏಜೆನ್ಸೀಸ್)