ಕರೊನಾ ವೈರಸ್ನಿಂದ ನಾವೆಲ್ಲ ಭಯಭೀತರಾಗಿದ್ದೇವೆ. ಕರೊನಾದಿಂದ ಕಲಿಯಬೇಕಾದ ಪಾಠವೇನೆಂದರೆ ಸಾವಿರಾರು ಜನರಿಗೆ ಕರೊನಾ ಸೋಂಕು ತಗಲಿದ್ದರೂ ಕೆಲವು ಜನ ಮಾತ್ರ ಸಾವಿಗೀಡಾಗುತ್ತಾರೆ. ಯಾರಲ್ಲಿ ರೋಗನಿರೋಧಕಶಕ್ತಿ ಕಡಿಮೆ ಇದೆಯೋ, ಯಾರ ಶ್ವಾಸಾಂಗವ್ಯೂಹ ದುರ್ಬಲವಾಗಿದೆಯೋ ಅಂಥವರಲ್ಲಿ ಈ ವೈರಸ್ನ ಪ್ರಭಾವ ಮತ್ತು ಸಾವಿನ ಸಾಧ್ಯತೆ ಹೆಚ್ಚು. ಜಂಕ್ ಫುಡ್ ಸೇವನೆ, ಧೂಮಪಾನ, ಅವ್ಯವಸ್ಥಿತ ಜೀವನಶೈಲಿ, ಅಪೌಷ್ಟಿಕ ಆಹಾರಸೇವನೆಗಳಿಂದಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಸರಿಯಾಗಿಟ್ಟುಕೊಂಡಿರದಿದ್ದರೆ ಕರೊನಾದಂತಹ ವೈರಸ್ಗಳ ಬಗ್ಗೆ ಹೆಚ್ಚು ಯೋಚಿಸಬೇಕಾಗುತ್ತದೆ. ಯೋಗಾಸನ, ಪ್ರಾಣಾಯಾಮ, ಆಯುರ್ವೆದದಲ್ಲಿ ವಿವರಿಸಿದ ದಿನಚರ್ಯು, ಋತುಚರ್ಯು, ಪಂಚಕರ್ಮ ಚಿಕಿತ್ಸೆ, ಜಲನೇತಿ, ಸೂತ್ರನೇತಿ, ವಮನಧೌತಿಯಂತಹ ಪ್ರಕೃತಿಚಿಕಿತ್ಸಾ ಕ್ರಿಯೆಗಳನ್ನು ಅನುಸರಿಸುವವರಿಗೆ ಕರೊನಾ ಅಷ್ಟೇ ಅಲ್ಲ, ಯಾವುದೇ ರೀತಿಯ ಸೋಂಕು ಬಹುತೇಕ ಯಾವುದೇ ಹಾನಿಯನ್ನೂ ಉಂಟುಮಾಡದು. ನಮ್ಮ ದೇಹ ಹೇಗಿರುತ್ತದೆ ಎಂಬುದನ್ನು ನಾವು ಸೇವಿಸುವ ಆಹಾರವೆ ನಿರ್ಧರಿಸುತ್ತದೆ. ಹಾಗಾಗಿ ಬಾಯಿಯ ರುಚಿಗಾಗಿ ಅಲ್ಲದೆ ಆರೋಗ್ಯಕ್ಕಾಗಿ ಆಹಾರ ಸೇವಿಸುವುದು ನಮ್ಮ ಜೀವನಶೈಲಿಯಾಗಬೇಕು. ರಿಫೈನ್ಡ್ ಎಣ್ಣೆ, ಸಕ್ಕರೆ, ಮೈದಾ, ರಾಸಾಯನಿಕಯುಕ್ತ ಆಹಾರಗಳು ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ ಇಂಥವುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಕರೊನಾ ವೈರಸ್ ವಿರುದ್ಧ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆಂದು ತಿಳಿಯೋಣ. ಶುಂಠಿ, ಕಾಳುಮೆಣಸು, ಜೀರಿಗೆ, ಲವಂಗ, ದಾಲ್ಚಿನ್ನಿ (ಚಕ್ಕೆ), ಅರಿಶಿಣ, ಕೊತ್ತಂಬರಿಯಂತಹ ಸಾಂಬಾರಪದಾರ್ಥಗಳನ್ನು ಹೆಚ್ಚು ಬಳಸಬೇಕು. ಕರಿದ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಮೊಸರಿನ ಬದಲು ಬೆಣ್ಣೆ ತೆಗೆದ ಮಜ್ಜಿಗೆಗೆ ಶುಂಠಿ, ಕಾಳುಮೆಣಸು, ಕೊತ್ತಂಬರಿ ಸೊಪ್ಪು, ಸೈಂಧವಲವಣ ಹಾಕಿ ಮಸಾಲಾ ಮಜ್ಜಿಗೆ ಮಾಡಿ ಕುಡಿಯುವುದು ಒಳ್ಳೆಯದು. ತಂಪುಪಾನೀಯ, ಐಸ್ಕ್ರೀಮ್ ಸೇವನೆ ಸದ್ಯಕ್ಕೆ ಬೇಡವೇ ಬೇಡ. ಜ್ಯೇಷ್ಠಮಧುವಿನ ಚಿಕ್ಕ ತುಣುಕನ್ನು ಆಗಾಗ ಬಾಯಲ್ಲಿಟ್ಟು ಚೀಪುತ್ತಿರುವುದು ಸಹಕಾರಿ. ಅಮೃತಬಳ್ಳಿ, ನೆಲನೆಲ್ಲಿ, ತುಳಸಿ, ಶುಂಠಿ ಇವೆಲ್ಲವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕುದಿಸಿ ಕಷಾಯ ಮಾಡಿ ಬೇಕಿದ್ದರೆ ಸ್ವಲ್ಪ ಜೋನಿಬೆಲ್ಲ ಸೇರಿಸಿ ಕುಡಿದರೆ ವೈರಸ್ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗಾಗಲೇ ಕಫ, ಕೆಮ್ಮು, ನೆಗಡಿ ಇದ್ದರೆ, ಕರೊನಾ ಸೋಂಕು ಸುಲಭವಾಗಿ ತೊಂದರೆ ಕೊಡಬಹುದು. ಹಾಗಾಗಿ ಇವುಗಳನ್ನು ಆದಷ್ಟು ಬೇಗ ಗುಣಮಾಡಿಕೊಳ್ಳಬೇಕು. ಆಡುಮುಟ್ಟದ ಸೊಪ್ಪಿನ ರಸ ಒಂದು ಚಮಚ, ಅರ್ಧ ಚಮಚ ತುಳಸಿ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಕುಡಿಯಬಹುದು. ಅರ್ಧ ಚಮಚ ಹಿಪ್ಪಲಿ, ಅದರ ಅರ್ಧದಷ್ಟು ಏಲಕ್ಕಿ ಮತ್ತು ಏಲಕ್ಕಿಯ ಅರ್ಧದಷ್ಟು ದಾಲ್ಚಿನ್ನಿ ಪುಡಿ ಸೇರಿಸಿದ ಮಿಶ್ರಣವನ್ನು ದಿನಕ್ಕೆ ನಾಲ್ಕು ಬಾರಿ ಜೇನುತುಪ್ಪದ ಜತೆಗೆ ಸೇವಿಸಬಹುದು. ಜ್ವರವಿದ್ದರೆ ಅಮೃತಬಳ್ಳಿ, ಕಿರಾತಕಡ್ಡಿ (ಚಿರಾಯತ), ಶುಂಠಿ, ಅರಿಶಿಣ ಹಾಕಿ ಕಷಾಯ ಮಾಡಿ ತಣಿದ ನಂತರ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯಬಹುದು. ಉಷ್ಣಗುಣದ ಇವುಗಳ ಸೇವನೆಯಿಂದ ದೇಹದಲ್ಲಿ ಉಷ್ಣತೆಯಾದರೆ ಜ್ಯೇಷ್ಠಮಧು ಮತ್ತು ಸೊಗದೆಬೇರನ್ನು ಬಳಸಬಹುದು. ತಂಪಾದ ಗುಣದ ಇವು ವೈರಸ್ನಿರೋಧಕ ಗುಣವನ್ನೂ ಹೊಂದಿವೆ. ಕರೊನಾಕ್ಕೆ ಹೆದರುವುದನ್ನು ಬಿಟ್ಟು ಕಾಳಜಿ ತೆಗೆದುಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ.
ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದಕ್ಕಾಗಲ್ಲ ಏಕೆ ಗೊತ್ತಾ? ನಿದ್ರೆಯ ಬಗ್ಗೆ ನಿಮಗೆ ಗೊತ್ತೇ ಇರದ ವಿಷಯಗಳಿವು!