ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿ ಪಾಸ್ಪೋರ್ಟ್ ರದ್ದು ಮಾಡುವಂತೆ ಈ ಹಿಂದೆ ಪತ್ರ ಬರೆದಿದ್ದರು, ಆದರೆ ಮತ್ತೆ ಈಗ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಬರೆದಿರುವ ಪತ್ರದಲ್ಲಿ: ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸರಣಿ ಕೃತ್ಯಗಳ ಬಗ್ಗೆ ನಾನು ನಿಮಗೆ ಮತ್ತೆ ಪತ್ರ ಬರೆಯುತ್ತಿದ್ದೇವೆ. ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಜನರನ್ನು ಬೆಚ್ಚಿಬೀಳಿಸಿದ ಪ್ರಕರಣ ಇದಾಗಿದೆ. ತಲೆತಗ್ಗಿಸುವಂಥಾ ಪ್ರಕರಣದಲ್ಲಿ ಹಾಸನ ಲೋಕಸಭಾ ಕೇತ್ರದ ಹಾಲಿ ಸಂಸದ ಹಾಗೂ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿರೋ ಮಾಜಿ ಪ್ರಧಾನಿಗಳ ಮೊಮ್ಮಗ ಪ್ರಜ್ವಲ್ ರೇವಣ್ಣ 2024 ಏಪ್ರಿಲ್ 27 ರಂದು ದೇಶಬಿಟ್ಟು ತಲೆಮರೆಸಿಕೊಂಡಿದ್ದಾನೆ. ಮೊಲ ಎಫ್ಐಆರ್ ದಾಖಲಾಗುವ ಕೆಲವೆ ಗಂಟೆಯಲ್ಲಿಯೇ ತನ್ನ ರಾಜತಾಂತ್ರಿಕ ಪಾಸ್ಪೋರ್ಟ್ ಸಂಖ್ಯೆ D1135500 ಬಳಸಿಕೊಂಡು ಜರ್ಮನಿಗೆ ಪರಾರಿಯಾಗಿದ್ದಾನೆ. ಕ್ರಿಮಿನಲ್ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರಾಜತಾಂತ್ರಿಕ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿದೆ. ಲುಕ್ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾನೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯ ಖಾಸಗಿತನಕ್ಕೆ ಧಕ್ಕೆ, ಮಹಿಳೆಗೆ ಬೆದರಿಕೆ ಒಟ್ಟುವ ನಿಟ್ಟಿನಲ್ಲಿ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರೀಕರಣದಂಥಾ ಗಂಭೀರ ಆರೋಪಗಳಿವೆ. ಇಂಥಾ ಉದ್ದೇಶಪೂರ್ವಕ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಅಥವಾ ಸಂಸ್ಥೆಗಳಿಗೆ ಅಧಿಕಾರವಿದೆ. ಹೀಗಾಗಿ 1967ರ ಪಾಸ್ಪೋಸ್ಟ್ ಕಾಯ್ದೆ ಪ್ರಕಾರ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಪಡಿಸಿ ದೇಶಕ್ಕೆ ಮರಳುವಂತೆ ಮಾಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದಿದ್ದಾರೆ.