ಅಥಣಿ: ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಪತ್ರಕರ್ತರು ವಸ್ತುನಿಷ್ಠ ವರದಿ ನೀಡಬೇಕು ಎಂದು ಡಿವೈಎಸ್ಪಿ ಎಸ್.ವಿ.ಗಿರೀಶ ಹೇಳಿದ್ದಾರೆ.
ಪಟ್ಟಣದ ಐಎಂಎ ಹಾಲ್ನಲ್ಲಿ ತಾಲೂಕು ಪತ್ರಕರ್ತರಿಗೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ಸುದ್ದಿ ನೀಡುವ ಭರಾಟೆಯಲ್ಲಿ ಅನೇಕ ತಪ್ಪುಗಳಾಗುತ್ತಿವೆ. ಈ ತಪ್ಪುಗಳು ಮರುಕಳಿಸದಂತೆ ವರದಿಗಾರರು ಎಚ್ಚರ ವಹಿಸಬೇಕು. ಸಮಾಜಮುಖಿ ಸುದ್ದಿಗಳಿಗೆ ಮಾಧ್ಯಮಗಳು ಇಂದು ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿಯಲ್ಲಿ ಒಂದು ಪತ್ರಿಕಾ ಭವನ ನಿರ್ಮಿಸುವುದ ಅವಶ್ಯವಾಗಿದೆ. ಭವನ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದು ಕೋರಿದರು. ಜತೆಗೆ, ಪತ್ರಕರ್ತರು ತಾಲೂಕಿನಲ್ಲಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಸರ್ಕಾರವನ್ನು ಎಚ್ಚರಿಸುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದರು. ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ, ವರದಿಗಾರಿಕೆ ಮತ್ತು ಇಂದಿನ ಸವಾಲುಗಳ ಕುರಿತು ಮಾತನಾಡಿದರು. ನಂತರ ಸುದ್ದಿ ಮಾಡುವ ವಿಧಾನ, ಅಂಕಿ-ಅಂಶಗಳ ಸಂಗ್ರಹ ಕುರಿತು ತಿಳಿ ಹೇಳಿದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಿಪಿಐ ಶಂಕರಗೌಡ ಬಸನಗೌಡರ, ವಿಜಯ ಭಜಂತ್ರಿ, ಡಾ.ಜೆ.ಪಿ.ದೊಡಮನಿ, ಶ್ರೀಶೈಲ ಗಸ್ತಿ, ಸಂಜೀವ ಒಡೆಯರ, ಶ್ರಾವ್ಯಾ ಚಿಕ್ಕಟ್ಟಿ ಅವರನ್ನು ಸತ್ಕರಿಸಲಾಯಿತು.