ಕಾರವಾರ: ಹೊಸ ವರ್ಷ ಆಚರಣೆಗೆ ಜಿಲ್ಲೆಯ ಕಡಲ ತೀರಗಳಲ್ಲಿ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ರೆಸಾರ್ಟ್, ಹೋಂ ಸ್ಟೇಗಳು ಭರ್ತಿಯಾಗುತ್ತಿವೆ. ಆದರೆ, ತೀರಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡುವ ಲೈಫ್ ಗಾರ್ಡ್ಗಳಿಲ್ಲ.
ವೇತನ ಪಾವತಿಯಾಗದ್ದು, ಹಾಗೂ ಹಾಗೂ ಕಡಿಮೆ ವೇತನ ಪಾವತಿಯ ಕಾರಣ ನೀಡಿ ಜಿಲ್ಲೆಯ 21 ಲೈಫ್ ಗಾರ್ಡ್ಗಳು ಕೆಲಸ ಸ್ಥಗಿತ ಮಾಡಿದ್ದಾರೆ. ಇದರಿಂದ ಜನರ ಸುರಕ್ಷತೆಯ ಸಮಸ್ಯೆ ಎದುರಾಗಿದೆ.
2016 ರಿಂದ ಜಿಲ್ಲೆಯ ಕಡಲ ತೀರಗಳಲ್ಲಿ ಲೈಫ್ಗಾರ್ಡ್ಗಳನ್ನು ನಿಯೋಜಿಸಲಾಗಿತ್ತು. ಸ್ಥಳೀಯ ಯುವಕರಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಗಿತ್ತು. ಕಾರವಾರದಲ್ಲಿ 3, ಗೋಕರ್ಣದಲ್ಲಿ 11 ಹಾಗೂ ಮುರ್ಡೆಶ್ವರದಲ್ಲಿ 7 ಲೈಫ್ಗಾರ್ಡ್ಗಳು ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಐದು ವರ್ಷಗಳಲ್ಲಿ ಅವರು ಮುರ್ಡೆಶ್ವರ, ಗೋಕರ್ಣ ಕಡಲ ತೀರಗಳಲ್ಲಿ 80 ಕ್ಕೂ ಅಧಿಕ ಜೀವಗಳನ್ನು ರಕ್ಷಿಸಿದ್ದರು. ಕಾರಣ ಪ್ರವಾಸಿ ತಾಣಗಳಲ್ಲಿ ಸಾವಿನ ಸಂಖ್ಯೆಯೂ ಇಳಿಮುಖವಾಗಿತ್ತು.
ಕಳೆದ ಅ.3 ರಂದು ಟ್ಯಾಗೋರ್ ಕಡಲ ತೀರದಲ್ಲಿ ಪ್ಯಾರಾಗ್ಲೈಡರ್ ಅಪಘಾತವಾದಾಗಲೂ ಪ್ರಯಾಣಿಕರ ರಕ್ಷಣೆಗೆ ಜೀವ ರಕ್ಷಕ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದರು. ಕಡಲ ತೀರದಲ್ಲಿ ಅಪಾಯಕಾರಿ ಸ್ಥಳಗಳ ಮಾಹಿತಿ ಇಲ್ಲದೇ ಪ್ರವಾಸಿಗರು ತೆರಳಿದರೆ ಲೈಫ್ ಗಾರ್ಡ್ಗಳು ಎಚ್ಚರಿಕೆ ನೀಡುತ್ತಿದ್ದರು.
ಕರೊನಾ ಆಘಾತ: ಜಿಲ್ಲಾಡಳಿತದಿಂದ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಲೈಫ್ಗಾರ್ಡ್, ಸ್ವಚ್ಛತಾ ಸಿಬ್ಬಂದಿ ಸೇರಿ 38 ಜನರಿಗೆ ವೇತನ ಪಾವತಿಸಲಾಗುತ್ತಿತ್ತು. ಲೈಫ್ ಗಾರ್ಡ್ಗಳಿಗೆ ಎಲ್ಲ ಸೌಲಭ್ಯ ಕಡಿದು ಮಾಸಿಕ 11 ಸಾವಿರ ರೂ.ದಷ್ಟು ವೇತನ ಲಭ್ಯವಾಗುತ್ತಿತ್ತು. ಆದರೆ, ಕರೊನಾ ಲಾಕ್ಡೌನ್ನಿಂದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಆದಾಯವಿಲ್ಲ. ಇದರಿಂದ ಲೈಫ್ ಗಾರ್ಡ್ಗಳಿಗೆ ಕೆಲ ದಿನ ಅರ್ಧ ವೇತನ ಪಾವತಿಸಲಾಯಿತು. 6 ತಿಂಗಳ ನಿರಂತರ ಬಂದ್ ಆದ ನಂತರ ಲೈಫ್ ಗಾರ್ಡ್ಗಳು ಅಕ್ಟೋಬರ್ನಲ್ಲಷ್ಟೇ ಕೆಲಸ ಪ್ರಾರಂಭಿಸಿದ್ದರು. ಈಗ ಮತ್ತೆ ಕೆಲಸ ಸ್ಥಗಿತ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಕೋವಿಡ್ ಕಾರಣದಿಂದ ಅನುದಾನವಿಲ್ಲ. ಆದಾಗ್ಯೂ ಅವರಿಗೆ ಸ್ವಲ್ಪ ವೇತನ ಪಾವತಿಸಿದ್ದೇವೆ. ಇತ್ತೀಚೆಗೆ ಅವರು ಕೆಲಸಕ್ಕೆ ಬರುತ್ತಿಲ್ಲ ಎಂದು ಕೇಳಿದ್ದೇನೆ. ಆದರೆ, ಯಾರೂ ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡಿಲ್ಲ. ಇನ್ನೊಂದು ದಿನ ನಾನೇ ಕರೆದು ರ್ಚಚಿಸಿ ಸಮಸ್ಯೆ ಬಗೆಹರಿಸುವೆ.
| ಕೃಷ್ಣಮೂರ್ತಿ ಎಚ್.ಕೆ., ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ