ಪ್ಯೊಂಗ್ಯಾಂಗ್: ಕಳೆದ ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ದಿಢೀರನೆ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದ್ದಾರೆ. ಗೊಬ್ಬರ ಕಾರ್ಖಾನೆಯೊಂದರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದ ಸುಂಚೊನ್ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಿಮ್ ತಮ್ಮ ಮುಖ ದರ್ಶನ ತೋರಿದರು. ಪ್ರಬಲ ಅಣ್ವಸ್ತ್ರಗಳನ್ನು ಹೊಂದಿರುವ ದೇಶದ ಏಕಚಕ್ರಾಧಿಪತಿ ಕಿಮ್, ಕಳೆದ ಮೂರು ವಾರಗಳಿಂದ ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳದೇ ಇದ್ದಿದ್ದು ಸಾಕಷ್ಟು ಊಹಾಪೋಹಗಳಿಗೆ ನೀರನ್ನು ಎರೆದಿತ್ತು.
ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?
ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರೆ, ಇನ್ನು ಕೆಲವರು ಅವರು ಸತ್ತೇ ಹೋಗಿದ್ದಾರೆ ಎಂದಿದ್ದರು. ಅದಕ್ಕೆ ಸಂಬಂಧಿಸಿದ ಕೆಲವು ನಕಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇನ್ನೊಂದೆಡೆ ಕಿಮ್ ಕರೊನಾದಿಂದ ಸುರಕ್ಷಿತವಾಗಿರಲು ತಮ್ಮ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದಿದ್ದರು. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಿಮ್ ಆರೋಗ್ಯ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದರು. ಕಳೆದ ಮೂರು ವಾರಗಳಲ್ಲಿ ಕಿಮ್, ಕರೊನಾದಷ್ಟೇ ಸುದ್ದಿಯಾಗಿಬಿಟ್ಟರು. ಇದೀಗ ನೋಡುದ್ರೆ ದಿಢೀರನೇ ಪ್ರತ್ಯಕ್ಷವಾಗಿದ್ದಾರೆ.
ಏಪ್ರಿಲ್ 11ರಂದು ನಡೆದ ಸಭೆಯೊಂದರ ಅಧ್ಯಕ್ಷತೆ ವಹಿಸಿದ ಬಳಿಕ ಕಿಮ್ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಇದರ ನಡುವೆ ಅವರು ಯುದ್ಧ ವಿಮಾನವನ್ನು ಪರಿಶೀಲಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೂ ಅಂದಿನಿಂದ ಹಲವು ದಿನಗಳವರೆಗೆ ಕಿಮ್ ಕಾಣಿಸಿಕೊಳ್ಳದಿದ್ದು, ಕೊರಿಯಾದಲ್ಲಿ ಆತಂಕಕ್ಕೇ ಎಡೆಮಾಡಿಕೊಟ್ಟಿತ್ತು.
ಶುಕ್ರವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷವಾದಾಗ ಅಲ್ಲಿ ನೆರೆದಿದ್ದವರು ಕಿಮ್ ಕಂಡು ಹರ್ಷೋದ್ಘಾರ ವ್ಯಕ್ತಪಡಿಸಿದರು ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ: ಸುಳ್ಳು ಹೇಳಿ ಬಾಯ್ಫ್ರೆಂಡ್ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?
ಕಾರ್ಯಕ್ರಮದ ವೇಳೆ ಮಾತನಾಡಿರುವ ಕಿಮ್, “ಆಧುನಿಕ ಫಾಸ್ಫಾಟಿಕ್ ರಸಗೊಬ್ಬರ ಕಾರ್ಖಾನೆಯನ್ನು ರಾಷ್ಟ್ರದಲ್ಲಿ ನಿರ್ಮಿಸಲಾಗಿದೆ ಎಂಬ ಸುದ್ದಿಯನ್ನು ನನ್ನಜ್ಜ ಕಿಮ್ ಇಲ್ ಸುಂಗ್ ಮತ್ತು ತಂದೆ ಕಿಮ್ ಜೊಂಗ್ ಇಲ್ ಕೇಳಿದ್ದರೆ ಇಂದು ತುಂಬಾ ಸಂತೋಷ ಪಡುತ್ತಿದ್ದರು ಎಂದು ತಾತ, ತಂದೆಯನ್ನು ನೆನೆದು ತುಂಬಾ ಭಾವುಕರಾದರು.
ಕಿಮ್ ಜತೆ ಹಿರಿಯ ಅಧಿಕಾರಿಗಳು ಮತ್ತು ಆತನ ಸಹೋದರಿ ಮತ್ತು ಆಪ್ತ ಸಲಹೆಗಾರ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮದ ಫೋಟೋವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಆದರೆ, ಮೂರು ವಾರಗಳವರೆಗೆ ಏನು ಮಾಡುತ್ತಿದ್ದರು ಎಂಬುದಕ್ಕೆ ಇನ್ನು ಸಮಂಜಸವಾದ ಉತ್ತರ ದೊರೆತಿಲ್ಲ. (ಏಜೆನ್ಸೀಸ್)
ಕರೊನಾ ಗೆದ್ದು ಬಂದ ನೀರಜ್ ಪಾಟೀಲ್: ಲಂಡನ್ನಲ್ಲಿ ಸೋಂಕಿನಿಂದ ಗುಣಮುಖರಾದ ಕನ್ನಡಿಗ