ಖಾನಾಪುರ: ತಾಲೂಕಿನ ಗಾಡಿಕೊಪ್ಪ, ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ ಸೇರಿದಂತೆ ಬೆಳಗಾವಿ ತಾಲೂಕು ಕುಕಡೊಳ್ಳಿ, ಚನ್ನಮ್ಮ ಕಿತ್ತೂರು ತಾಲೂಕಿನ ಅಮರಾಪುರ, ವೀರಾಪುರ ಗ್ರಾಮಗಳ ಸುತ್ತಲಿನ ಕೃಷಿ ಭೂಮಿಗಳಲ್ಲಿ ಎರಡು ಕಾಡೆಮ್ಮೆ, ಕಾಡುಕೋಣಗಳು ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನ ಗೋಚರಿಸಿವೆ. ಅರಣ್ಯೇತರ ಪ್ರದೇಶದಲ್ಲಿ ಇವುಗಳ ಸಂಚಾರದಿಂದಾಗಿ ರೈತರಲ್ಲಿ ಆತಂಕ ಮೂಡಿದ್ದು, ಕೆಲ ರೈತರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ರೈತರು ಟೊಮ್ಯಾಟೋ, ಮೆಣಸಿನಕಾಯಿ, ಹಾಗಲಕಾಯಿ, ಕ್ಯಾಬೀಜ್ ಮತ್ತಿತರ ತರಕಾರಿ ಬೆಳೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದಾರೆ. ಹೀಗಾಗಿ ಕಾಡುಕೋಣಗಳು ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡುವ ಮೊದಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಗಾಡಿಕೊಪ್ಪ ಗ್ರಾಮದ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಖಾನಾಪುರ ವಲಯ ಅರಣ್ಯಾಧಿಕಾರಿ ಕವಿತಾ ಈರನಟ್ಟಿ ಮಾತನಾಡಿ, ಪ್ರಾಣಿಗಳು ಅರಣ್ಯದಿಂದ ಆಹಾರ ಅರಸುತ್ತ ಗಾಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಕ್ಕೆ ಬಂದಿರುವ ಸಾಧ್ಯತೆಯಿದೆ. ಕಾಡುಕೋಣ ಕಾಣಿಸಿಕೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪ್ರಾಣಿಗಳಿಗೆ ಸಾರ್ವಜನಿಕರು ತೊಂದರೆ ನೀಡಬಾರದು. ಅವುಗಳನ್ನು ಕೆರಳಿಸಬಾರದು. ಬೆಳೆಹಾನಿ ಆಗಿದ್ದಲ್ಲಿ ಪರಿಹಾರಕ್ಕಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಕೋರಿದ್ದಾರೆ.