ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಸ್ಎಲ್ಎಒ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ 6 ತಿಂಗಳು ಕಳೆದರೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣದೆ ತನಿಖೆ ಹಳ್ಳಹಿಡಿದಿದೆ.
ಕೆಐಎಡಿಬಿ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದ 7 ಮಧ್ಯವರ್ತಿಗಳು ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ. ಇದೀಗ ದಾಳಿ ನಡೆದು 6 ತಿಂಗಳು ಕಳೆದರೂ ಈ ಅವ್ಯವಹಾರಕ್ಕೆ ಸಂಬಂಧಿಸಿದ ಸಾಕ್ಷ್ಯ ಸಂಗ್ರಹಿಸಲು ಎಸಿಬಿ ವಿಫಲವಾಗಿದೆ. ಕಾಣದ ಕೈಗಳು ಪ್ರಭಾವ ಬಳಸಿರುವ ಆರೋಪ ಕೇಳಿಬಂದಿದೆ. ಕೆಐಎಡಿಬಿ ಅಧಿಕಾರಿಗಳು ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವುದು ಗಮನಕ್ಕೆ ಬಂದರೂ ಪ್ರಕರಣ ನಿರ್ಲಕ್ಷಿಸಿ ಸೂಕ್ತ ತನಿಖೆ ನಡೆಸದ ಎಸಿಬಿ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರೈತರ ದೂರಿನ ಮೇರೆಗೆ ದಾಳಿ ನಡೆಸಿ, ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದು ಬಿಟ್ಟರೆ ಎಸಿಬಿ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: ಡ್ರೋನ್ ಪ್ರತಾಪ ಕ್ವಾರಂಟೈನ್ನಲ್ಲಿದ್ದಾರಂತೆ..
ಪಾರಾಗಲು ಯತ್ನ: ಕೆಐಎಡಿಬಿ ಎಸ್ಎಲ್ಎಒ ಭೂಸ್ವಾಧೀನಾಧಿಕಾರಿ ಪೂರ್ಣಿಮಾ ಸೇರಿ ಕೆಲ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿತ್ತು. ರೈತರಿಂದ ಲಂಚ ಪಡೆಯುತ್ತಿದ್ದ ವಿಚಾರ ನಮ್ಮ ಗಮನಕ್ಕೆ ಬಂದಿರಲಿಲ್ಲ. ಕಚೇರಿಗೆ ನೂರಾರು ಸಾರ್ವಜನಿಕರು ಬರುತ್ತಿದ್ದರು. ಇದರಲ್ಲಿ ಮಧ್ಯವರ್ತಿಗಳಿದ್ದ ವಿಚಾರವೂ ಗೊತ್ತಿರಲಿಲ್ಲ ಎಂಬ ಹೇಳಿಕೆ ನೀಡಿ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಈ ಪ್ರಕರಣದ ಪ್ರಮುಖ ವ್ಯಕ್ತಿ ಕೆಐಎಡಿಬಿ ಹಿರಿಯ ಸಹಾಯಕ ಎಲ್. ಶ್ರೀನಿವಾಸ್ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿ ಪ್ರಕರಣದ ದಿಕ್ಕುತಪ್ಪಿಸಲು ಯತ್ನಿಸಿದ್ದ. ಬಳಿಕ ಕಳೆದ 4 ತಿಂಗಳಿನಿಂದ ಎಸಿಬಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.
ಇದನ್ನೂ ಓದಿ: ಒಂದೇ ದಿನ 45 ಸಾವು!
ಏನಿದು ಪ್ರಕರಣ ? ಡಾಬಸ್ಪೇಟೆಯ ಸೋಂಪುರದಲ್ಲಿ ಕೆಲ ವರ್ಷಗಳ ಹಿಂದೆ ಸರ್ಕಾರ ರೈತರ 800 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶವಾಗಿ ಮಾರ್ಪಡಿಸಿತ್ತು. ವಶಪಡಿಸಿಕೊಂಡ ಜಮೀನಿನ ಸಂಬಂಧ ರೈತರಿಗೆ ಭೂಪರಿಹಾರ ಮೊತ್ತದ ಪೈಕಿ 50 ಕೋಟಿ ರೂ.ಗಳನ್ನು ಸೆ.20ರಂದು ಸರ್ಕಾರ ಬಿಡುಗಡೆ ಮಾಡಿತ್ತು. ಜಮೀನು ಕಳೆದುಕೊಂಡ ರೈತರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಪರಿಹಾರ ರೂಪದಲ್ಲಿ ಸರ್ಕಾರದಿಂದ ಹಣ ಜಮೆ ಮಾಡಲಾಗುತ್ತಿತ್ತು. ಈ ಹಣದಲ್ಲಿ ಶೇ.10 ಅನ್ನು ಕೆಐಎಡಿಬಿ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಲಂಚದ ರೂಪದಲ್ಲಿ ಪಡೆಯುತ್ತಿದ್ದರು. ಶೇ.10 ಹಣ ನೀಡಲು ನಿರಾಕರಿಸಿದ ರೈತರ ಖಾತೆಗೆ ಪರಿಹಾರದ ಹಣ ಜಮೆ ಮಾಡುತ್ತಿರಲಿಲ್ಲ. ಈ ಅನ್ಯಾಯದ ಬಗ್ಗೆ ರೈತರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಆಧಾರದ ಮೇಲೆ ರೇಸ್ಕೋರ್ಸ್ ರಸ್ತೆಯ ಖನಿಜ ಭವನದ 4 ಮತ್ತು 5ನೇ ಮಹಡಿಯಲ್ಲಿರುವ ಕೆಐಎಡಿಬಿ ಕಚೇರಿ ಮೇಲೆ 2019ರಲ್ಲಿ ದಾಳಿ ನಡೆಸಿದ್ದರು.