ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಪೂರ್ಣವಾಗುವವರೆಗೂ ಲೋಡ್ ಶೆಡ್ಡಿಂಗ್ ಮಾಡದಿರಲು ಎಲ್ಲ ಎಸ್ಕಾಂಗಳು (ವಿದ್ಯುತ್ ಸರಬರಾಜು ಸಂಸ್ಥೆ) ಸ್ವಯಂ ನಿರ್ಧಾರವನ್ನು ಕೈಗೊಂಡಿವೆ. ಇದರಿಂದಾಗಿ ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳು ಹಾಗೂ ಬೆಳೆಗಳಿಗೆ ನೀರು ಹಾಯಿಸಬೇಕಿರುವ ರೈತರು ವಿದ್ಯುತ್ ಅಭಾವದಿಂದ ಪಾರಾದಂತಾಗಿದೆ.
ರಾಜ್ಯ ವಿದ್ಯುತ್ ವ್ಯವಹಾರ ಸಮಿತಿಯ ಅಧ್ಯಕ್ಷರೂ ಆಗಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಈ ಒಮ್ಮತದ ತೀರ್ಮಾನ ಹೊರಬಿದ್ದಿದೆ.
ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಸಿಗೆಯಲ್ಲಿ ರೈತರಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ಪೂರೈಸುವ ವಾಗ್ದಾನವನ್ನು ನೀಡಿದ್ದರು. ಅಲ್ಲದೆ ಕಳೆದ ವರ್ಷ ರಾಜ್ಯದ ಜಲವಿದ್ಯುತ್ ಹಾಗೂ ಅಸಾಂಪ್ರದಾಯಿಕ ಘಟಕಗಳಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಆಗಿರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಹೊಂದಿಸುವುದು ಕಷ್ಟಕರವಾಗುವುದಿಲ್ಲ. ತೀರಾ ಅಗತ್ಯವಿದ್ದಲ್ಲಿ ಖರೀದಿ ಮಾಡಿಯಾದರೂ ಬೇಡಿಕೆಯಷ್ಟು ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರ ಎಸ್ಕಾಂಗಳಿಗೆ ಸೂಚಿಸಿರುವುದರಿಂದ ಗ್ರಾಹಕರು ಲೊಡ್ ಶೆಡ್ಡಿಂಗ್ ಭೀತಿಯಿಂದ ಪಾರಾದಂತಾಗಿದೆ.
ಇದನ್ನೂ ಓದಿ: ನಾವ್ಯಾಕೆ ಮೋದಿ ಹೆಸರನ್ನು ಹೇಳುತ್ತಿರುತ್ತೇವೆ? ಮೋದಿಯವರ ಗುರಿ ಮುಂದಿನ ಚುನಾವಣೆಯಲ್ಲ: ಸಂಸದೆ ಶೋಭಾ ಕರಂದ್ಲಾಜೆ
ಈ ಸಂಬಂಧ ಸಭೆಯ ಬಳಿಕ ಪ್ರತಿಕ್ರಿಯಿಸಿರುವ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ, ಮುಂದಿನ ಮೂರು ತಿಂಗಳ ಅವಧಿಗೆ ಬೇಕಾಗುವ ವಿದ್ಯುತ್ ಬೇಡಿಕೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ಎಲ್ಲ ಎಸ್ಕಾಂಗಳು ಅದಕ್ಕೆ ಬೇಕಾಗುವ ವಿದ್ಯುತ್ ಖರೀದಿಸಿ ಗ್ರಾಹಕರಿಗೆ ಪೂರೈಸಲು ತೀರ್ಮಾನಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!
ಬೆಸ್ಕಾಂಗೆ 7,600 ಮೆ.ವ್ಯಾ. ಬೇಡಿಕೆ: ಹಾಲಿ ಮಾರ್ಚ್ ತಿಂಗಳಿನಿಂದ ಮೇ ವರೆಗಿನ ಮೂರು ತಿಂಗಳು ವಿದ್ಯುತ್ ಬೇಡಿಕೆ ಹಾಗೂ ಬಳಕೆ ಪ್ರಮಾಣವನ್ನು ಬೆಸ್ಕಾಂ ಈಗಾಗಲೇ ಅಂದಾಜಿಸಿದೆ. ಹೀಗಾಗಿ ಮಾರ್ಚ್ನಲ್ಲಿ ದಿನದ ಗರಿಷ್ಠ ಬೇಡಿಕೆ 7,600 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ಇದೆ. ಕಳೆದ ವಾರದಿಂದೀಚಿಗೆ ಈ ಪ್ರಮಾಣ 7,400 ಮೆ.ವ್ಯಾ. ದಾಖಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ 7,650 ಮೆ.ವ್ಯಾ. ತಲುಪಲಿದ್ದು, ದಿನನ ವಿದ್ಯುತ್ ಬಳಕೆ ಸರಾಸರಿ 135 ದಶಲಕ್ಷ ಯೂನಿಟ್ ಆಗಲಿದೆ. ಇದೇ ರೀತಿ ಮೇ ತಿಂಗಳಲ್ಲಿ ದಿನದ ವಿದ್ಯುತ್ ಬೇಡಿಕೆ 6,800 ಮೆ.ವ್ಯಾ. ಇರಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 124 ದಶಲಕ್ಷ ಯೂನಿಟ್ಗೆ ಇಳಿಕೆಯಾಗುವುದೆಂದು ನಿರೀಕ್ಷಿಸಲಾಗಿದೆ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಸರಾಗ ವಿದ್ಯುತ್ ಸರಬರಾಜು ಮಾಡುವ ಅಭಯವನ್ನು ಎಸ್ಕಾಂಗಳು ನೀಡಿವೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!