More

    ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಭೂಮಾಲೀಕರ ಎನ್‌ಒಸಿ ಬೇಕಿಲ್ಲ : ಹೈಕೋರ್ಟ್ ಮಹತ್ವದ ಆದೇಶ

    ಬೆಂಗಳೂರು : ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಳಿಗೆ ಬಾಡಿಗೆ ಪಡೆದಿರುವ ಮಾಲೀಕರಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲೇಬೇಕೆಂದು ಬಿಬಿಎಂಪಿ ಒತ್ತಡ ಹೇರುವಂತಿಲ್ಲ, ಎನ್‌ಒಸಿ ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.


    ವೆಲ್‌ವೆಟ್ ಹೆಸರಿನಲ್ಲಿ ಹೋಟೇಲ್ ನಡೆಸುತ್ತಿರುವ ಪಂಚರತ್ನ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯನೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಿಬಿಎಂಪಿ ಕಾಯ್ದೆಯ 2020ರ ಸೆಕ್ಷನ್ 305ರಡಿ ಪರವಾನಗಿ ನೀಡಲಾಗಿದೆ. ಅಂತೆಯೇ ನವೀಕರಣ ಪ್ರಕ್ರಿಯೆಗಳನ್ನೂ ನಿಯಮಗಳಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಬಿಬಿಎಂಪಿ ನಿಯಮಗಳನ್ನು ರೂಪಿಸದ ಕಾರಣ ಸಂವಿಧಾನದ ಕಲಂ 19(1)(ಜಿ) ಪ್ರಕಾರ ಮೂಲಭೂತ ಹಕ್ಕುಗಳಿಗೆ ತಡೆಯೊಡ್ಡಲಾಗುವುದಿಲ್ಲ ಎಂದು ಹೇಳಿತು.


    ಹೋಟೆಲ್ ಮುಚ್ಚುವ ಬಿಬಿಎಂಪಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಭೂ ಮಾಲೀಕರಿಗೆ ಎನ್‌ಒಸಿ ಪಡೆಯುವಂತೆ ಒತ್ತಾಯಿಸದೆ ವ್ಯಾಪಾರ ಪರವಾನಗಿಯನ್ನು ನವೀಕರಣ ಮಾಡಿಕೊಡುವಂತೆ ಆದೇಶಿಸಿದೆ.


    ಅಲ್ಲದೆ, ಭೂ ಮಾಲೀಕರು ಮತ್ತು ಅರ್ಜಿದಾರರ ನಡುವಿನ ವ್ಯಾಜ್ಯ ಬಾಕಿ ಇದ್ದು, ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಸಂಸ್ಥೆಯನ್ನು ಬಾಲಾಜಿ ಪೋತರಾಜು ಪ್ರತಿನಿಧಿಸುತ್ತಿದ್ದು, ಲೀಸ್ ಡೀಡ್ ಇದೆ. ಅದು ಇತ್ಯರ್ಥವಾಗುವವರೆಗೆ ಆಸ್ತಿ ಅರ್ಜಿದಾರರ ಸುಪರ್ದಿಯಲ್ಲಿರುತ್ತದೆ. ಹೀಗಾಗಿ ಮತ್ತೆ ಭೂ ಮಾಲೀಕರಿಂದ ಎನ್‌ಒಸಿ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

    ಪ್ರಕರಣದ ಹಿನ್ನೆಲೆ
    ಪಂಚರತ್ನ ಎಂಟರ್‌ಪ್ರೈಸಸ್ ಆರಂಭದಲ್ಲಿ ಶುಲ್ಕ ಪಾವತಿಸಿ 2019ರ ಜು.31ರಂದು ವ್ಯಾಪಾರ ಪರವಾನಗಿ ಪಡೆದು ಹೋಟೆಲ್ ನಡೆಸುತ್ತಿತ್ತು. ಆ ಪಾಲುದಾರಿಕೆ ಸಂಸ್ಥೆ ಮರು ಸ್ಥಾಪನೆಯಾಗಿ, ಬಾಲಾಜಿ ಪೋತರಾಜ್ ಪಾಲುದಾರರಾಗಿ ಸೇರ್ಪಡೆಯಾದರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. 2023ರ ಜ.6ರಂದು ವ್ಯಾಪಾರ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಬಿಬಿಎಂಪಿ ಭೂ ಮಾಲೀಕರಿಂದ ಎನ್‌ಒಸಿ ಪಡೆಯಬೇಕೆಂದು ಸೂಚಿಸಿತ್ತು. ಜತೆಗೆ 2023ರ ಮೇ 30ರಂದು ಹೋಟೆಲ್‌ಗೆ ಬೀಗ ಹಾಕಿತ್ತು.

    ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾಗ ನ್ಯಾಯಾಲಯ, ಅರ್ಜಿದಾರರ ವ್ಯಾಪಾರ ಪರವಾನಗಿ ನವೀಕರಣ ಅರ್ಜಿ ಪರಿಗಣಿಸುವಂತೆ ಆದೇಶ ನೀಡಿತ್ತು. 2023ರ ಜು.5ರಂದು ಬಿಬಿಎಂಪಿ ಮತ್ತೆ ಭೂ ಮಾಲೀಕರಿಂದ ಎನ್‌ಒಸಿ ತರಬೇಕೆಂದು ಸೂಚಿಸಿತ್ತು. ಆಗ ಅರ್ಜಿದಾರರು ಭೂ ಮಾಲೀಕರಿಂದ ಎನ್‌ಒಸಿ ಅಗತ್ಯವಿಲ್ಲ, ಜತೆಗೆ ಭೂ ಮಾಲೀಕರ ಜತೆಗಿನ ವ್ಯಾಜ್ಯ ಬಾಕಿ ಇದೆ ಎಂದು ಮತ್ತೆ ಹೈಕೋರ್ಟ್‌ಗೆ ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts