ಶಿರಹಟ್ಟಿ: ಎಸ್ಸಿ, ಎಸ್ಟಿ ಸಮುದಾಯದ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ನಿರ್ವಿುಸಿದ ವಸತಿ ನಿಲಯ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.
2017-18ರಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ 99 ಲಕ್ಷ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಎಸ್ಜೆಎಫ್ ಸರ್ಕಾರಿ ಪದವಿ ಕಾಲೇಜ್ ಆವರಣದಲ್ಲಿ ವಸತಿ ನಿಲಯ ನಿರ್ವಿುಸಲಾಗಿದೆ. ಕಾಲೇಜ್ ಶಿಕ್ಷಣ ಇಲಾಖೆಗೆ ಒಳಪಡುವ ವಸತಿ ನಿಲಯ ಕಟ್ಟಡ 2017ರಲ್ಲಿಯೇ ಉದ್ಘಾಟನೆಯಾಗಿದೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ನಿತ್ಯ ಬಸ್ ಮೂಲಕ ವ್ಯಾಸಂಗಕ್ಕೆ ಬರುವ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿನಿಯರ ತಾಪತ್ರಯ ತಪ್ಪಿಸಲು ಸರ್ಕಾರದಿಂದ ಕಟ್ಟಡ ನಿರ್ವಿುಸಿದ್ದೇನೋ ನಿಜ. ಆದರೆ, ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ನೀರು ಪೂರೈಕೆ, ಹಾಸಿಗೆ ಸೌಲಭ್ಯ ಕಲ್ಪಿಸಿಲ್ಲ. ಅಲ್ಲದೆ, ಅದಕ್ಕೆ ಬೇಕಾದ ವಾರ್ಡನ್, ಅಡುಗೆ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಆರಂಭದ ದಿನದಿಂದ ಈವರೆಗೆ ವಿದ್ಯಾರ್ಥಿನಿಯರೂ ಇಲ್ಲಿ ಬಂದಿಲ್ಲ. ಯಾವ ಪುರುಷಾರ್ಥಕ್ಕಾಗಿ ವಸತಿ ನಿಲಯ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.
ಕ್ಷೇತ್ರದ ಶಾಸಕರು ಕಾಲೇಜ್ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ವಸತಿ ನಿಲಯಕ್ಕೆ ಮೂಲಸೌಲಭ್ಯ ಒದಗಿಸಿ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ವಹಿಸಿದರೆ, ವಸತಿ ನಿಲಯ ಬಡ ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಲು ಸಹಕಾರಿಯಾಗುತ್ತದೆ.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಬೇಕಾದ ಕಟ್ಟಡ ಪುಂಡ-ಪೋಕರಿಗಳ ಅನೈತಿಕ ಚಟುವಟಿಕೆ ತಾಣವಾಗಿರುವುದು ವಿಷಾದದ ಸಂಗತಿ. ಸರ್ಕಾರದ ಉದ್ದೇಶ ಸಾಕಾರಗೊಳ್ಳಬೇಕಾದರೆ ಶಾಸಕರು ಇಚ್ಛಾಶಕ್ತಿ ತೋರಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಸತಿ ನಿಲಯ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ.
| ನಾಗರಾಜ ಲಕ್ಕುಂಡಿ ಪಪಂ ಮಾಜಿ ಅಧ್ಯಕ್ಷ
ವಸತಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ವಹಿಸಲು ಕಾಲೇಜ್ ಶಿಕ್ಷಣ ಆಯುಕ್ತರು ಸೂಚಿಸಿದ್ದರು. ಬಳಿಕ ವಸತಿ ನಿಲಯಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸುವ ಜತೆಗೆ ಸುತ್ತ ಕಾಂಪೌಂಡ್ ನಿರ್ವಿುಸಬೇಕು. ಅಲ್ಲದೆ, 20 ಗುಂಟೆ ಹೆಚ್ಚುವರಿ ಜಾಗ, ವಸತಿ ನಿಲಯದ ಮಾಲೀಕತ್ವದ ಪತ್ರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಷರತ್ತು ಬದ್ಧ ಮರುಪತ್ರ ನೀಡಿದ್ದರು. ಮುಂದಿನ ಕ್ರಮಕ್ಕಾಗಿ ಆ ಪತ್ರವನ್ನು ಕಾಲೇಜ್ ಶಿಕ್ಷಣ ಆಯುಕ್ತರಿಗೆ ಕಳುಹಿಸಲಾಗಿದೆ. ಈವರಗೆ ಯಾವುದೇ ಉತ್ತರ ಬಂದಿಲ್ಲ.
| ಡಾ. ಎಸ್.ಆರ್. ಶಿರಹಟ್ಟಿ ಪದವಿ ಕಾಲೇಜ್ ಪ್ರಾಚಾರ್ಯ