ಗಾಜಿಯಾಬಾದ್: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರೀಗ ಮನೆ ಇದ್ದರೂ ಅಲ್ಲಿಗೆ ಬರುವಂತಿಲ್ಲ! ಹೀಗಂತ ನೋಟಿಸ್ ಹಾಕಿದೆ ಅಪಾರ್ಟ್ಮೆಂಟ್ ಮಾಲೀಕರ ಸಂಘ.
ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್ಸಿಆರ್ ಗಡಿ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂರ್ಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ದೆಹಲಿಯ ಕರೊನಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಮೂಲಕವೂ ಸೋಂಕು ಹರಡಬಹುದು ಎಂಬ ಆತಂಕ ಈ ವ್ಯಾಪ್ತಿಯಲ್ಲಿ ಕಾಡುತ್ತಿದೆ. ಹಾಗಾಗಿ ಗಾಜಿಯಾಬಾದ್ನ ನೀಲ್ಪಡಂ ಕುಂಜ್ ಎಂಬ ವಸತಿ ಸಂಘ ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘವು ತನ್ನ ವಸತಿ ಸಮುಚ್ಛಯದಲ್ಲಿ ವಾಸವಿದ್ದ ವೈದ್ಯರಿಗೆ ಲಾಕ್ಡೌನ್ ಅವಧಿ ಮುಗಿಯುವವರೆಗೂ ತಾತ್ಕಾಲಿಕವಾಗಿ ದೆಹಲಿಯಲ್ಲೇ ವಸತಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದೆ. ಮೇ 10ರಿಂದ ಮನೆಗೆ ಬರಬೇಡಿ ಎಂದೂ ಹೇಳಿದೆ.
ಇದನ್ನೂ ಓದಿ ಮದ್ಯಕ್ಕೆ ಇನ್ಮುಂದೆ ಆಧಾರ್ ಕಡ್ಡಾಯ, ವಾರಕ್ಕೆರಡೇ ದಿನ ಖರೀದಿ- ಇದು ಹೈಕೋರ್ಟ್ ತೀರ್ಪು
ವೈದ್ಯರ ಪ್ರವೇಶ ನಿಷೇಧಿಸಿ ಅಪಾರ್ಟ್ಮೆಂಟ್ ಬಳಿ ನೋಟಿಸ್ ಅಂಟಿಸಿರುವ ಅಪಾರ್ಟ್ಮೆಂಟ್ ಮಾಲೀಕರ ಸಂಘ (ಎಒಎ), ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಪ್ರವೇಶಕ್ಕೆ ಅನುಮತಿ ಇಲ್ಲ. ಈ ಪ್ರದೇಶವು ಕಂಟೈನ್ಮೆಂಟ್ ಝೋನ್ನಲ್ಲಿ ಬರುವುದರಿಂದ ನಾವು ಗಾಜಿಯಾಬಾದ್ ಪಾಲಿಕೆ ಆದೇಶವನ್ನು ಪಾಲಿಸಬೇಕಿದೆ ಎಂದು ತಿಳಿಸಿದೆ. ಜತೆಗೆ ಪಾಲಿಕೆ ಆಯುಕ್ತ ದಿನೇಶ್ ಚಂದ್ರ ಅವರ ಸಲಹೆಯನ್ನೂ ಉಲ್ಲೇಖಿಸಿದೆ.
ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಭಾನುವಾರ ಬೆಳಗ್ಗೆಯಿಂದ ಇಲ್ಲಿನ ಮನೆಗಳ ಪ್ರವೇಶ ನಿಷೇಧಿಸಲಾಗುತ್ತದೆ. ದೆಹಲಿಯಲ್ಲಿ ಕೆಸಲ ಮಾಡುತ್ತಿರುವ ಇಲ್ಲಿನ ಆರೋಗ್ಯ ಸಿಬ್ಬಂದಿ ಲಾಕ್ಡೌನ್ ಮುಗಿಯುವವರೆಗೂ ರಾಷ್ಟ್ರ ರಾಜಧಾನಿಯಲ್ಲೇ ಉಳಿದುಕೊಂಡು ಕೆಸಲ ಮಾಡಬೇಕು ಎಂದು ನೋಟಿಸ್ ಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ ವೈದ್ಯರು ಕೆಲಸ ಮುಗಿಸಿಕೊಂಡು ತಮ್ಮ ಮನೆಗಳಿಗೆ ಮರಳುವಂತೆ ಅವಕಾಶ ನೀಡಲು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ (ಆರ್ಡಬ್ಲ್ಯುಎ) ಹಿಂಜರಿಯುತ್ತಿದೆ.
ಇದನ್ನೂ ಓದಿ ಕರೊನಾ ಮಣಿಸುವ ಹೋರಾಟದಲ್ಲಿ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳ ಮೆಚ್ಚುಗೆ
ಐಎಂಎ ಆಕ್ಷೇಪ: ವೈದ್ಯರ ಮನೆ ಪ್ರವೇಶ ನಿರ್ಬಂಧ ಕ್ರಮದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಗರಂ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಐಎಂಎ, ಗಾಜಿಯಾಬಾದ್ನಲ್ಲಿ ವೈದ್ಯರಿಗೆ ಸ್ಥಳೀಯ ಆಡಳಿತ ಕಿರುಕುಳ ನೀಡುತ್ತಿದೆ. ಅಪಾರ್ಟ್ಮೆಂಟ್ ಮಾಲೀಕರ ಸಂಘ ಹೊರಡಿಸಿದ ನೋಟಿಸ್ ಆಕ್ಷೇಪಾರ್ಹ. ಜನರು ಅವರ ಮನೆಗೆ ಹೋಗುವುದನ್ನು ತಡೆಯಲು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗೆ ಹಕ್ಕಿಲ್ಲ. ಆದರೆ, ಆಡಳಿತ ಮಾತ್ರ ಆರ್ಡಬ್ಲ್ಯುಎಗೆ ಇಷ್ಟ ಬಂದಂತೆ ನಿರ್ಧಾರ ಕೈಗೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದು ಟೀಕಿಸಿದೆ.
ಜಿಲ್ಲಾಡಳಿತ ಸ್ಪಷ್ಟನೆ: ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಪ್ರತಿನಿತ್ಯ ಮನೆಗೆ ಪ್ರಯಾಣ ಮಾಡುವ ಬದಲು ಲಾಕ್ಡೌನ್ ಮುಗಿಯುವವರೆಗೂ ರಾಜಧಾನಿಯಲ್ಲೇ ಉಳಿದುಕೊಳ್ಳಬೇಕು ಎಂದಿದ್ದ ಜಿಲ್ಲಾಡಳಿತ ಕೊನೆಗೆ ಸ್ಪಷ್ಟನೆ ನೀಡಿದೆ. ಇದು ಆದೇಶವಲ್ಲ, ಮನವಿಯಷ್ಟೆ ಎಂದಿದೆ.
ಇದನ್ನೂ ಓದಿ ಕರೊನಾ ಸೋಂಕಿತ ಬಾಗಲಕೋಟೆ ಗರ್ಭಿಣಿಯ ಗರ್ಭಪಾತಕ್ಕೆ ವೈದ್ಯರು ಮುಂದಾಗಿದ್ದೇಕೆ?
No entry for Corona doctor in apartment ..!