ಉಡುಪಿ: ಜಿಲ್ಲೆ ಹಸಿರು ವಲಯದಲ್ಲಿದ್ದರೂ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಸಂಚಾರ ಗೊಂದಲ ಇನ್ನೂ ಮುಂದುವರಿದಿದೆ. ಇತ್ತ ಶೇ.50 ಪ್ರಯಾಣಿಕರೊಂದಿಗೆ ಬಸ್ ಓಡಿಸಲು ಸಿದ್ಧ ಎಂದು ಬಸ್ ಮಾಲೀಕರು ಹೇಳುತ್ತಿದ್ದರೂ, ಜಿಲ್ಲಾಡಳಿತ ಬಸ್ ಓಡಿಸುವ ನಿರ್ಧಾರವನ್ನು ಇನ್ನೊಂದು ವಾರ ಮುಂದಕ್ಕೆ ಹಾಕಿದೆ.
ಕೋವಿಡ್-19 ಎಲ್ಲ ನಿಯಮಾವಳಿಗಳನ್ನು ಅನುಸರಿಸಿಕೊಂಡು ಷರತ್ತುಬದ್ಧವಾಗಿ ಬಸ್ ಓಡಿಸಲು ನಾವು ತಯಾರಿದ್ದೇವೆ ಎನ್ನುತ್ತಾರೆ ಕರಾವಳಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್. ಶೇ.50 ಪ್ರಯಾಣಿಕರೊಂದಿಗೆ ಬಸ್ ಓಡಿಸುವುದು, ಸ್ಯಾನಿಟೈಸ್ ಪ್ರಕ್ರಿಯೆ, ಇತರೆ ನಿಯಮಾವಳಿಗಳನ್ನು ನಾವು ಸಮರ್ಪಕವಾಗಿ ಅನುಸರಿಸುತ್ತೇವೆ. ಜಿಲ್ಲಾಡಳಿತ ನಾಳೆಯೇ ಒಪ್ಪಿಗೆ ನೀಡಿದರೆ ಒಂದು ದಿನದಲ್ಲಿ ಎಲ್ಲ ರೀತಿಯ ತಯಾರಿಯೊಂದಿಗೆ ಬಸ್ ಓಡಿಸಲು ಸಿದ್ಧ. ಆದರೆ ಎಲ್ಲ ಪ್ರಯಾಣಿಕರಿಗೆ ಪೂರ್ತಿ ಟಿಕೆಟ್ ದರ ವಿಧಿಸುತ್ತೇವೆ. ಪಾಸ್ ಸೌಲಭ್ಯ ಯಾರಿಗೂ ನೀಡಲಾಗದು ಎಂದು ಬಸ್ ರಾಘವೇಂದ್ರ ಭಟ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಒಪ್ಪಿಗೆ ನೀಡಲಿ: ಜಿಲ್ಲೆಯ ಕರಾವಳಿ ಬಸ್ ಮಾಲೀಕರ ಸಂಘದ ವ್ಯಾಪ್ತಿಯಡಿಯಲ್ಲಿ 80ಕ್ಕೂ ಅಧಿಕ ಸರ್ವೀಸ್ ಮತ್ತು ಎಕ್ಸ್ಪ್ರೆಸ್ ಬಸ್ಗಳಿವೆ. ಉಡುಪಿ- ಕುಂದಾಪುರ -ಕಾರ್ಕಳ-ಹೆಬ್ರಿ ಕೇಂದ್ರೀಕರಿಸಿ ಈ ಬಸ್ಸುಗಳು ಓಡಾಟ ನಡೆಸುತ್ತವೆ. 300 ರಿಂದ 350 ಮಂದಿ ಡ್ರೈವರ್ ಮತ್ತು ಕಂಡಕ್ಟರ್ಗಳು ಇದರಿಂದ ಜೀವನ ನಡೆಸುತ್ತಿದ್ದಾರೆ. ಕರೊನಾ ಮುಂಜಾಗ್ರತಾ ಕ್ರಮವಾಗಿ ಬಸ್ನಲ್ಲಿ ಸ್ಯಾನಿಟೈಸರ್ ಬಳಕೆ, ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗುವುದು. ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಮಾತ್ರ ಬಸ್ ಒಳಗೆ ಪ್ರವೇಶ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತ ಒಪ್ಪಿಗೆ ನೀಡಬೇಕು ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ವಿಜಯವಾಣಿಗೆ ತಿಳಿಸಿದ್ದಾರೆ.
ಖಾಸಗಿ ಮತ್ತು ಕೆಎಸ್ಆರ್ಟಿಸಿ ಸೇವೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಇನ್ನೊಂದು ವಾರದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಕರಾವಳಿ ಬಸ್ ಮಾಲೀಕರ ಸಂಘದ ಮನವಿ ಗಮನಕ್ಕೆ ಬಂದಿಲ್ಲ. ಆರ್ಟಿಒ ಅಧಿಕಾರಿಗಳೊಡನೆ ಚರ್ಚಿಸಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ