ಸ್ವಯಂಘೋಷಿತ ದೇವಮಾನವ ಮತ್ತು ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸದ್ಯ ಅವರೆಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ಸ್ವಾಮಿ ನಿತ್ಯಾನಂದ ಬಿಡದಿಯಿಂದ ಪಲಾಯನ ಮಾಡಿ, ಅದ್ಯಾವುದೋ ದ್ವೀಪದಲ್ಲಿ ‘ಕೈಲಾಸ’ ದೇಶ ನಿರ್ಮಿಸಿಕೊಂಡು, ಸಕಲ ವೈಭೋಗಗಳೊಂದಿಗೆ ಬದುಕುತ್ತಿದ್ದಾರೆಂದು ಹೇಳಲಾಗಿದೆ.
ಹೀಗಿರುವಾಗ ಸ್ವಾಮಿ ನಿತ್ಯಾನಂದನ ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ತಾವಿರುವ ಕೈಲಾಸದಲ್ಲಿ ರಿಸರ್ವ್ ಬ್ಯಾಂಕ್ನ್ನು ಸ್ಥಾಪಿಸಲಾಗಿದೆ. ಅದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂದು ಅವರು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಕೈಲಾಸದ ಕರೆನ್ಸಿ(ನೋಟು)ಯನ್ನು ಈ ಬಾರಿಯ ಗಣೇಶ ಚತುರ್ಥಿಯಂದು ಪರಿಚಯಿಸಲಾಗುವುದು ಎಂದು ದೇವಮಾನವ ಹೇಳಿದ್ದಾರೆ.
ಜಗತ್ತಿನಾದ್ಯಂತ ಇರುವ ಹಲವು ದೇಶಗಳಲ್ಲಿರುವ ಹಿಂದುಗಳು, ತಮ್ಮ ದೇಶದಲ್ಲಿ ಧರ್ಮಾಚರಣೆ ಮಾಡಲಾಗದೆ ಬಂದು ಈ ನಿತ್ಯಾನಂದನ ಕೈಲಾಸ ಸೇರಿಕೊಂಡಿದ್ದಾರೆ ಎಂದೂ ಕೆಲವು ವೆಬ್ಸೈಟ್ಗಳು ವರದಿ ಮಾಡಿವೆ.
ಈಗ ಅದೇ ಕೈಲಾಸ ದೇಶದಿಂದ ವಿಭಿನ್ನ ನೋಟು ಕೂಡ ಪರಿಚಿತವಾಗುತ್ತಿದೆ ಎಂಬುದನ್ನು ನಿತ್ಯಾನಂದ ತಿಳಿಸಿದ್ದಾರೆ.
ಕೈಲಾಸದಲ್ಲಿ ಹಿಂದು ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿದೆ. ನೋಟು ಕೂಡ ರಚನೆಯಾಗಿದೆ. ಅದಕ್ಕೆ ಸಂಬಂಧಪಟ್ಟಂತೆ 300 ಪೇಜ್ಗಳ ದಾಖಲೆಗಳೂ ಇವೆ. ಎಲ್ಲವೂ ಕಾನೂನಾತ್ಮಕವಾಗಿಯೇ ಆಗಿದೆ. ಕರೆನ್ಸಿಯ ಹೆಸರು, ಡಿಸೈನ್ಗಳನ್ನೆಲ್ಲ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಪರಿಚಯಿಸುತ್ತೇವೆ ಎಂದು ನಿತ್ಯಾನಂದ ಹೇಳಿದ್ದಾರೆ. (ಏಜೆನ್ಸೀಸ್)