ಬೆಂಗಳೂರು: ಹಿರಿಯ ಸಂಗೀತ ನಿರ್ದೇಶಕ ರಾಜನ್ (ರಾಜನ್ – ನಾಗೇಂದ್ರ) ಹೊಸ ಪ್ರತಿಭೆಗಳನ್ನು ಪರಿಚಯಿಸಲು ‘ಸಪ್ತ ಸ್ವರಾಂಜಲಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆ ಆರಂಭಿಸಿದ್ದರು. ಸಂಸ್ಥೆಯಲ್ಲಿ ಕಲಿತಿರುವ ಹಲವರು ಇಂದು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಈಗ ರಾಜನ್ ಅವರ ಪುತ್ರ ಅನಂತ ರಾಜನ್, ರಾಜನ್ ನಾಗೇಂದ್ರ ಟ್ರಸ್ಟ್ ವತಿಯಿಂದ, ರಾಜನ್ ನಾಗೇಂದ್ರ ಅವರ ಗೀತೆಗಳಿಗೆ ಹೊಸ ರೂಪ ನೀಡುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗಷ್ಟೆ ರಾಜನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಜನ್ ನಾಗೇಂದ್ರ ಗಾನಯಾನ’ ಘೋಷಿಸಿದ್ದಾರೆ. ‘ಕನ್ನಡ ಸಿನಿಮಾ ಸಂಗೀತದಲ್ಲಿ ರಾಜನ್ – ನಾಗೇಂದ್ರ ಹಾಡುಗಳ ಚಿನ್ನವಿದ್ದಂತೆ. ಹಳೆಯದಾದರೂ ಚಿನ್ನಕ್ಕೆ ಇರುವ ಬೆಲೆ ಇದ್ದೇ ಇರುತ್ತದೆ. ಹಳೆಯ ಚಿನ್ನವನ್ನು ಪಾಲಿಶ್ ಮಾಡಿ ಮತ್ತೆ ಬಳಸುವಂತೆ, ಅವರ ಗೋಲ್ಡನ್ ಹಾಡುಗಳನ್ನು ಇಂದಿನ ಕೇಳುಗರಿಗೆ ಇಷ್ಟವಾಗುವಂತೆ, ಹೊಸ ರೂಪದಲ್ಲಿ ಮತ್ತೆ ತರುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ಹಿರಿಯ ನಿರ್ದೇಶಕ ಭಾರ್ಗವ, ‘ರಾಜನ್ – ನಾಗೇಂದ್ರ ನನ್ನ ನಿರ್ದೇಶನದ 26 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಸುಮಾರು 38 ಸಿನಿಮಾಗಳಿಗೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅಪರೂಪದ, ಸದಭಿರುಚಿ ಸಂಗೀತ ನಿರ್ದೇಶಕರಲ್ಲಿ ಈ ಜೋಡಿ ಕೂಡ ಒಂದು’ ಎಂದರು. ಈ ಸಂದರ್ಭದಲ್ಲಿ ಗುರುದತ್, ಲಹರಿ ವೇಲು, ಸಿಂಚನಾ, ಭೂಮಿಕಾ, ಸ್ಮಿತಾ, ಕೀರ್ತನಾ ಹಾಜರಿದ್ದರು.