ತುಮಕೂರು: ನಾಡಿನೆಲ್ಲಡೆ ಪ್ರಸಿದ್ಧಿ ಹೊಂದಿರುವ ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಹಾಗೂ ನಿರಂಜನ ಪಟ್ಟಾಧಿಕಾರಿ ಮಹೋತ್ಸವವನ್ನು ಏ.23ರ ಜಸವ ಜಯಂತಿಯಂದು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿದ್ದಗಂಗಾ ಮಠದ ಜತೆಗೆ ಶ್ರೀಮಠದ ಪರಂಪರೆಯ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇಮಠ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಸವಕಲ್ಯಾಣ ಮಠಕ್ಕು ‘ಅಕ್ಷಯ ತೃತೀಯ’ ಪ್ರಸಿದ್ಧವಾದ ಬಸವಯಜಯಂತಿಯಂದೇ ಉತ್ತರಾಧಿಕಾರಿಗಳ ನೇಮಕ ಕಾರ್ಯಕ್ರಮವು ನಡೆಯಲಿದೆ.
ಉತ್ತರಾಧಿಕಾರಿಗಾಗಿ ಶೋಧ
2019, ಜ.21 ರಂದು ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಶ್ರೀಮಠವನ್ನು ಮುನ್ನಡೆಸುತ್ತಿದ್ದು ಅಂದಿನಿಂದಲೇ ತ್ರಿವಿಧ ದಾಸೋಹ ಪರಂಪರೆಯ ಶ್ರೀಮಠಕ್ಕೆ ಉತ್ತರಾಧಿಕಾರಿ ಶೋಧ ನಡೆದಿತ್ತು.
ಮಾರ್ಚ್ 31, 1988ರಲ್ಲಿ ಸಿದ್ದಗಂಗಾಮಠದ ಉತ್ತರಾಧಿಕಾರಿಯಾಗಿನೇಮಕಗೊಂಡ ಸಿದ್ದಲಿಂಗ ಶ್ರೀಗಳು ಅಂದು ಶಿವಕುಮಾರ ಶ್ರೀಗಳಿಂದ ಸಂನ್ಯಾಸ ದೀಕ್ಷಾ ಸ್ವೀಕರಿಸಿ ಅವರ ನೆರಳಲ್ಲೇ ಅರಳಿದರು. 2006ರಲ್ಲಿ ಸಿದ್ದಗಂಗಾಮಠಾಧ್ಯಕ್ಷರಾಗಿ ಸಿದ್ದಲಿಂಗ ಶ್ರೀಗಳಿಗೆ ಸಂಪೂರ್ಣ ಅಧಿಕಾರವನ್ನು ಶಿವಕುಮಾರ ಶ್ರೀಗಳು ಹಸ್ತಾಂತರಿಸಿದರಾದರೂ ಹಿರಿಯ ಶ್ರೀಗಳ ಆದೇಶಾನುಸಾರವೇ ಮಠವನ್ನು ಸಿದ್ದಲಿಂಗ ಶ್ರೀಗಳು ಮುನ್ನಡೆಸಿಕೊಂಡುಬಂದಿದ್ದರು.
ಇದನ್ನೂ ಓದಿ: ನಾಮಪತ್ರ ಸಲ್ಲಿಸಲು ಕುದುರೆ ಏರಿ ಬಂದ ಎಎಪಿ ಅಭ್ಯರ್ಥಿ!
ಸಿದ್ದಗಂಗೆಗೆ ಮನೋಜ್ ಕುಮಾರ್
ಶ್ರೀಮಠದ ನೂತನ ಉತ್ತರಾಧಿಕಾರಿಯನ್ನಾಗಿ 36 ವರ್ಷದ ಮನೋಜ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಎಂ.ಎಸ್ಸಿ ಪದವೀಧರ, ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಮನೋಜ್ ಕುಮಾರ್ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯವರು.
ಶ್ರೀ ಕಂಚುಗಲ್ ಬಂಡೇಮಠಕ್ಕೆ ಎಂ.ಎ., ಸಂಸ್ಕೃತ ವ್ಯಾಸಾಂಗ ಮಾಡುತ್ತಿರುವ 25 ವರ್ಷದ ಕೆ.ಎಂ.ಹರ್ಷ ಅವರನ್ನು ನೇಮಿಸಲಾಗಿದೆ. ತುಮಕೂರು ತಾಲೂಕಿನ ಕಾಳೇನಹಳ್ಳಿ ಹರ್ಷ ಹುಟ್ಟೂರು. ಬಸವಕಲ್ಯಾಣ ಮಠಕ್ಕೆ ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ ಬಿಳುಗುಲಿಯ ಗೌರೀಶ್ ಕುಮಾರ್ರನ್ನು ನಿಯೋಜಿಸಲಾಗಿದೆ.