ರಿಪ್ಪನ್ಪೇಟೆ: ಗ್ರಾಮೀಣ ಪ್ರದೇಶದ ಮಹಿಳೆಯರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬಟ್ಟೆಮಲ್ಲಪ್ಪ-ಹರತಾಳು ಮಾರ್ಗವಾಗಿ ರಿಪ್ಪನ್ಪೇಟೆಗೆ ನೂತನ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಮಂಗಳವಾರ ಹರತಾಳಿನಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಹಲವು ವರ್ಷಗಳಿಂದ ಈ ಭಾಗದಲ್ಲಿ ಬಸ್ ಸಂಚಾರ ಆರಂಭಿಸುವAತೆ ಇಲ್ಲಿನ ಜನ ಬೇಡಿಕೆ ಇಟ್ಟಿದ್ದು ಈಗ ಈಡೇರಿದೆ ಎಂದರು.
ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಜನರಿಂದ ಸರ್ಕಾರಿ ಬಸ್ಗಳ ಬೇಡಿಕೆಯೂ ಹೆಚ್ಚಾಗಿದೆ. ಹಿಂದಿನ ಸರ್ಕಾರ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡದಿರುವುದರಿಂದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಅಽಕಾರಕ್ಕೆ ಬರುತ್ತಿದ್ದಂತೆ 4 ಸಾವಿರ ಬಸ್ಗಳ ಖರೀದಿಗೆ ಮುಂದಾಗಿದೆ. ಸದ್ಯದಲ್ಲೇ ಸಾಗರ ಡಿಪೋಗೂ 80 ಹೊಸ ಬಸ್ಗಳು ಬರಲಿದ್ದು ಗ್ರಾಮಾಂತರ ಪ್ರದೇಶದ ಜನರ ಬೇಡಿಕೆಗಳನ್ನೂ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷೆ ನಾಗರತ್ನಾ, ಸದಸ್ಯರಾದ ಸಾಕಮ್ಮ, ನಾರಿ ರವಿ, ನಾರಾಯಣಪ್ಪ, ಸತ್ಯವತಿ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ, ಮುಖಂಡರಾದ ಬಿ.ಜಿ.ನಾಗರಾಜ, ಚಂದ್ರಮೌಳಿ, ಎರಗಿ ಉಮೇಶ, ಫ್ಯಾನ್ಸಿ ರಮೇಶ, ಜಿ.ಆರ್.ಗೋಪಾಲಕೃಷ್ಣ , ತಹಸೀಲ್ದಾರ್ ಡಿ.ಜಿ.ಕೋರಿ, ತಾಪಂ ಇಒ ನರೇಂದ್ರಕುಮಾರ್, ಪಿಡಿಒ ಚೇತನ್ ಇತರರಿದ್ದರು.
ರಾಜ್ಯ ಸರ್ಕಾರ ಪರಿಪೂರ್ಣ ಬಹುಮತ ಹೊಂದಿದೆ. ಸಮಗ್ರ ಅಭಿವೃದ್ಧಿಯೊಂದಿಗೆ ೫ ವರ್ಷದ ಸ್ಥಿರ ಸರ್ಕಾರ ನಡೆಸುತ್ತೇವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದೊಮ್ಮೆ ವಿದೇಶಕ್ಕೆ ತೆರಳಿಯೇ ತಮ್ಮ ಸರ್ಕಾರವನ್ನು ಕಳೆದುಕೊಂಡಿದ್ದರು. ಈಗ ಅವರು ನಮ್ಮ ಸರ್ಕಾರ ಅಸ್ಥಿರಗೊಳಿಸುವ ಭ್ರಮೆಯಲ್ಲಿದ್ದಾರೆ. ಅಂತಹ ಯಾವುದೇ ಯೋಜನೆಗಳು ರಾಜ್ಯದಲ್ಲಿ ಫಲ ನೀಡುವುದಿಲ್ಲ. ಹಗಲು ಗನಸು ಕಾಣುವುದು ಬೇಡ.
| ಬೇಳೂರು ಗೋಪಾಲಕೃಷ್ಣ
ಶಾಸಕ