ನವದೆಹಲಿ: ಮಹಾಮಾರಿ ಕರೊನಾವೈರಸ್ನ್ನು ಕೊನೆಗಾಣಿಸಲು ಯಶಸ್ವಿ ಲಸಿಕೆ ಕಂಡು ಹಿಡಿಯಲು ಇಡೀ ಜಗತ್ತಿನ ಘಟಾನುಘಟಿ ತಜ್ಞರ ತಂಡವೇ ಹೆಣಗಾಡುತ್ತಿದೆ. ಇಂಥ ದಯನೀಯ ಪರಿಸ್ಥಿತಿಯಲ್ಲಿ ಕರೊನಾಗೆ ರಾಮಬಾಣ ಎಂದು ಹೇಳಿಕೊಳ್ಳುವ ಹುಸಿ ‘ಮದ್ದು’ಗಳೇ ಹೆಸರು ಮಾಡುತ್ತಿವೆ.
ಏತನ್ಮಧ್ಯೆ ಕೇಂದ್ರ ಸಚಿವ ಅರ್ಜುನ್ ರಾಂ ಮೇಘವಾಲ್ ವಿನೂತನ ಬಗೆಯ ಹಪ್ಪಳವನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಹಪ್ಪಳವನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗಿ, ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿಕೆ ಕೂಡ ನೀಡಿದ್ದಾರೆ ಎನ್ನಲಾದ ವೀಡಿಯೋ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿವೆ. ಸಚಿವರ ಈ ಅಸಂಬದ್ಧ ಹೇಳಿಕೆ ಸಾಕಷ್ಟು ಚರ್ಚೆ ಹಾಗೂ ತಮಾಷೆಗೆ ಕಾರಣವಾಗಿದೆ.
ಇದನ್ನು ಓದಿ: ಬಂದಿವೆ ಹೊಸ ಬಗೆಯ ಹಪ್ಪಳ: ಇವನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚುತ್ತವಂತೆ!
“ಆದ್ಮನಿರ್ಭರ್ ಭಾರತ್ ಉಪಕ್ರಮದಡಿ ಭಾಭಿ ಜಿ ಪಾಪಡ್ ಅನ್ನು ತಯಾರಿಸಲಾಗುತ್ತಿದೆ. ಕರೋನವೈರಸ್ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ, ”ಎಂದು ಮೇಘವಾಲ್ ಹೇಳಿದ್ದಾರೆನ್ನಲಾದ ವೀಡಿಯೋ ಇದೆ.
ದೇಶದಲ್ಲಿ ಕರೋನವೈರಸ್ ಪತ್ತೆಯಾದಾಗಿನಿಂದ, ಅದರ ಕುರಿತು ಮಾಡಲಾದ ವಿಲಕ್ಷಣ ವಿಡಿಯೋ, ಹೇಳಿಕೆಗಳಿಗೆ ಕೊನೆಯೇ ಕಂಡುಬರುತ್ತಿಲ್ಲ. ’‘ಗೋ ಕರೋನಾ ಗೋ’ ಮಂತ್ರದಿಂದ ಆರಂಭಗೊಂಡು ‘ಕರೋನಾ ಭಾಗ್ ಜಾ ’ಭಕ್ತಿಗೀತೆ ವರೆಗೂ ನೆಟ್ಟಿಗರಿಗೆ ಈ ವರ್ಷ ತಮಾಷೆಗೆ ಸಾಕಷ್ಟು ಆಹಾರ ಸಿಕ್ಕಿದೆ ಎಂದೇ ಹೇಳಬಹುದು.
ಕರೊನಾ ವೈರಸ್ನ ಈ ಭಯಾನಕ ದಿನಗಳಲ್ಲಿ ಯಾವುದೇ ಉತ್ಪನ್ನವನ್ನು ಪರಿಚಯಿಸಿದರೂ ‘ರೋಗ ಗುಣಪಡಿಸುವ’ ಉತ್ಪನ್ನವೆಂದೇ ಹೇಳಲಾಗುತ್ತಿದೆ. ಈಗ, ಈ ‘ಪಾಪಾಡ್’ ಬ್ರಾಂಡ್ ಕೂಡ ಆ ಪಟ್ಟಿಗೆ ಸೇರ್ಪಡೆಯಾಗಿದೆ. ಒಂದೆಡೆ, ಸಾಕಷ್ಟು ಅಸಂಬದ್ಧ ಮಾಹಿತಿಗಳನ್ನು ತಡೆಯಲಾಗಿದ್ದರೆ ಮತ್ತು ಇನ್ನೊಂದೆಡೆ, ‘ಗುಣಪಡಿಸುವಿಕೆ’ ಎಂದು ಹೇಳಿಕೊಳ್ಳುವ ಸಾಕಷ್ಟು ಉತ್ಪನ್ನಗಳು ಪ್ರಚಾರಗೊಳ್ಳುತ್ತಿವೆ.
ಇದನ್ನೂ ಓದಿ: 10 ಸಾವಿರ ರೂ.ಕೊಟ್ರೆ ಮಾತ್ರ ನಿನ್ನ ಖಾಸಗಿ ಫೋಟೊ ಡಿಲೀಟ್ ಮಾಡ್ತೇನೆ ಎಂದ ಆಕೆಯ ಸೋಷಿಯಲ್ ಮೀಡಿಯಾ ಮಿತ್ರ
ಸಚಿವರ ‘ಭಾಭಿಜಿ ಪಾಪಡ್’ ಕುರಿತು ಆನ್ಲೈನ್ನಲ್ಲಿ ವೀಡಿಯೊ ಕಾಣಿಸಿಕೊಂಡ ತಕ್ಷಣ, ಹಲವಾರು ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೇಂದ್ರ ಸಚಿವರು ತೋರಿದ ‘ಮೂರ್ಖತನ’ದ ಪರಿಮಾವಧಿಯಿಂದಾಗಿ ಅಪಹಾಸ್ಯಕ್ಕೊಳಗಾಗಿದ್ದಾರೆ.
ಕರೊನಾಗೆ ಲಸಿಕೆ ತಯಾರಿಸುವಲ್ಲಿ ದುಡ್ಡು ಮತ್ತು ಸಮಯ ಹಾಳಾಗುವುದನ್ನು ನಿಲ್ಲಿಸಿ ಎಂದು ಬಳಕೆದಾರರೊಬ್ಬರು ಸಚಿವರಿಗೆ ಸೂಕ್ತ ಸಲಹೆ ಕೊಟ್ಟಿದ್ದಾರೆ. ಅನೇಕರು ಏಕಕಾಲಕ್ಕೆ ತಮಾಷೆ ಮಾಡಿದ್ದಾರೆ.
ಇಲ್ಲಿಯವರೆಗೂ ಜಗತ್ತು ಕರೊನಾವೈರಸ್ಗೆ ಲಸಿಕೆ ಕಂಡುಹಿಡಿಯಲು ಹೆಣಗಾಡುತ್ತಿದೆ. ಖಚಿತವಾದ ಯಾವುದೇ ಚಿಕಿತ್ಸೆ ಇನ್ನೂ ಬಂದಿಲ್ಲ, ಅದೃಷ್ಟವಶಾತ್ ಸೂಕ್ತ ಲಸಿಕೆ ಬಂದ ನಂತರ ಅದು ‘ಕರೊನಾಗೆ ರಾಮಬಾಣ’ ಎಂದು ಹೇಳಿಕೊಳ್ಳುವ ಎಲ್ಲ ವಿಲಕ್ಷಣ ಹೇಳಿಕೆಗಳಿಗೂ ಚಿರ ವಿಶ್ರಾಂತಿ ನೀಡುತ್ತದೆ. ಅಲ್ಲಿಯವರೆಗೂ ಇಂತಹ ಹುಸಿ ‘ಮದ್ದು’ಗಳ ಕುರಿತು ಬರುವ ಜೋಕ್ಗಳನ್ನು ಆನಂದಿಸಬಹುದು.
ಕಾಯುವವನೇ ಕಳ್ಳನಾದಾಗ ಇನ್ನಾರನ್ನು ನಂಬೋದು ಶಿವಾ…!!