ಕಟ್ಮಂಡು: ಕಳೆದ ತಿಂಗಳು ನೇಪಾಳದ ರೆಸಾರ್ಟ್ ಒಂದರಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಎಂಟು ಜನ ಭಾರತೀಯ ಪ್ರವಾಸಿಗಳು ಮೃತರಾದ ಹಿನ್ನೆಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್ನ ಪರವಾನಗಿಯನ್ನು ಮೂರು ತಿಂಗಳ ಮಟ್ಟಿಗೆ ರದ್ದು ಗೊಳಿಸಿದೆ. ಮೂರು ತಿಂಗಳ ನಂತರ ಅಗತ್ಯ ಸುರಕ್ಷಾ ಕ್ರಮಗಳು ರೆಸಾರ್ಟ್ನಲ್ಲಿದ್ದರೆ ಮಾತ್ರವೇ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ.
ಜನವರಿ ತಿಂಗಳ 21 ನೇ ತಾರೀಖಿನಂದು ಕೇರಳದಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 15 ಜನರ ಗುಂಪು ನೇಪಾಳದ ಮಕ್ವಾನ್ಪುರ ಜಿಲ್ಲೆಯಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್ ಒಂದರಲ್ಲಿ ರೂಂ ಮಾಡಿಕೊಂಡು ತಂಗಿತ್ತು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿದ್ದ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರಿಗೆ ಉಸಿರು ಕಟ್ಟಲು ಆರಂಭಿಸಿತ್ತು. ತಕ್ಷಣವೇ ಅವರನ್ನು ಎಚ್ಎಎಮ್ಎಸ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮಾರ್ಗ ಮಧ್ಯವೇ ಮೃತ ಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದರು. ಪ್ರವಾಸಿಗರಿಗೆ ಉಸಿರು ಕಟ್ಟಲು ರೂಮಿನಲ್ಲಿದ್ದ ಹೀಟರ್ನಿಂದ ಅನಿಲ ಸೋರಿಕೆಯಾಗಿದ್ದೇ ಕಾರಣ ಎನ್ನಲಾಗಿತ್ತು.
ಪ್ರವಾಸಿಗರ ದೂರಿನ ಆಧಾರದ ಮೇರೆಗೆ ರೆಸಾರ್ಟ್ನ ಪರಿಶೀಲನೆಗೆಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸುರೇಂದ್ರ ಥಾಪಾ ಅವತ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ವಿಮಾನಯಾನ ಸಚಿವರುಗಳು ಇದ್ದ ಆ ಸಮಿತಿಯು ರೆಸಾರ್ಟ್ನ ಪರಿಶೀಲನೆ ನಡೆಸಿ, ಅದರಲ್ಲಿರುವ ನ್ಯೂನ್ಯತೆಗಳನ್ನು ಸೂಚಿಸುವಂತಹ ವರದಿಯೊಂದನ್ನು ತಯಾರಿಸಿತ್ತು. ಆ ವರದಿಯ ಆಧಾರದ ಮೇಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್ನ ಪರವಾನಗಿಯನ್ನು ರದ್ದು ಮಾಡಿದೆ.
ಡಿಟಿಒ ನಿಗದಿ ಪಡಿಸಿರುವ ಮಾನದಂಡಗಳನ್ನು ರೆಸಾರ್ಟ್ ಪಾಲಿಸುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೀಗ ಪ್ರವಾಸೋದ್ಯಮ ಕಾಯ್ದೆ – 1979ರ ಸೆಕ್ಷನ್ 15ರ ಪ್ರಕಾರ ರೆಸಾರ್ಟ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಮೂರು ತಿಂಗಳ ಒಳಗಾಗಿ ರೆಸಾರ್ಟ್ ಎಲ್ಲ ಮಾನದಂಡಗಳನ್ನು ಪಾಲಿಸಿದ್ದಾದಲ್ಲಿ ಮಾತ್ರವೇ ಅದಕ್ಕೆ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ. ತಪ್ಪಿನ ಅರಿವಾಗಿದೆ ಎಂದಿರುವ ರೆಸಾರ್ಟ್ನ ಮಾಲೀಕರು ಮೂರು ತಿಂಗಳ ಒಳಗಾಗಿ ತಪ್ಪನ್ನು ತಿದ್ದಿಕೊಂಡು ಅಗತ್ಯ ಸುರಕ್ಷತೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)