ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಶ್ರೀಮಂತ ಮನೆತನದ ಯುವಕ ಅರುಣನ (ನೀನಾಸಂ ಸತೀಶ್) ತಾಯಿ ನಿಧನ ಹೊಂದುತ್ತಾರೆ. ಅದೇ ನೋವಿನಲ್ಲಿ ಆತ ಹೊರಪ್ರಪಂಚದಿಂದ ಅಂತರ ಕಾಯ್ದುಕೊಳ್ಳುತ್ತಾನೆ. ಗರ್ಲ್್ರೆಂಡ್ ಅಕ್ಷರಾಗೂ (ರಚಿತಾ) ಏನು ಮಾಡಬೇಕೆಂದು ತೋಚುವುದಿಲ್ಲ. ಆ ಸಮಯದಲ್ಲಿ ಮತ್ತೆ ಆತನಲ್ಲಿ ಜೀವನೋತ್ಸಾಹ ತುಂಬಲು ಹಳೆಯ ಗೆಳಯರು ಜತೆಯಾಗುತ್ತಾರೆ. ಆದರೆ, ಆ ಗೆಳೆಯರು ಅರುಣ ಜೀವನಕ್ಕೆ ಬರಲು ಕಾರಣ ಬೇರೆಯೇ ಇರುತ್ತದೆ. ಅದು ತಿಳಿಯುವಷ್ಟರಲ್ಲಿ ಅರುಣನ ಬಂಗಲೆಯಲ್ಲಿ ಅತಿಮಾನುಷ ಶಕ್ತಿಗಳ ಅನಾವರಣವಾಗುತ್ತದೆ. ಮತ್ತೊಂದೆಡೆ ಚಿತ್ರಳ (ಅದಿತಿ ಪ್ರಭುದೇವ) ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಪೊಲೀಸ್ ದೂರು ನೀಡುತ್ತಾರೆ. ಹಾಗಾದರೆ ಈ ಚಿತ್ರ ಯಾರು? ಆಕೆಗೂ ಅರುಣನಿಗೂ ಏನು ಸಂಬಂಧ? ಗೆಳೆಯರು ಮತ್ತೆ ಅರುಣನ ಜತೆಯಾಗಲು ಕಾರಣವೇನು? ನಿಜವಾಗಲೂ ಆ ಮನೆಯಲ್ಲಿ ದೆವ್ವಗಳಿವೆಯಾ? ಹೀಗೆ ಹಲವು ಪ್ರಶ್ನೆಗಳಿಗೆ “ಮ್ಯಾಟ್ನಿ’ಯಲ್ಲಿ ಉತ್ತರ ನೀಡುತ್ತಾ ಸಾಗುತ್ತಾರೆ ನಿರ್ದೇಶಕ ಮನೋಹರ್ ಕಾಂಪಲ್ಲಿ.
“ಅಯೋಗ್ಯ’ ಚಿತ್ರದ ಬಳಿಕ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ನಟಿಸಿರುವ ಸಿನಿಮಾ “ಮ್ಯಾಟ್ನಿ’. “ಅಯೋಗ್ಯ’ ಗ್ರಾಮೀಣ ಸೊಗಡಿನ ರೊಮ್ಯಾಂಟಿಕ್ ಸ್ಟೋರಿಯಾದರೆ, “ಮ್ಯಾಟ್ನಿ’ ಥ್ರಿಲ್ಲರ್ ಜಾನರ್ ಸಿನಿಮಾ. ಹೀಗಾಗಿಯೇ ಈ ಜೋಡಿಯನ್ನು ಹೊಸ ಪಾತ್ರಗಳಲ್ಲಿ ನೋಡಲು ಚಂದವೆನಿಸುತ್ತದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಸತೀಶ್ ಗಮನ ಸೆಳೆಯುತ್ತಾರೆ. ಗೆಳೆಯರಾಗಿ ನಾಗಭೂಷಣ, ಶಿವರಾಜ್ ಕೆ.ಆರ್. ಪೇಟೆ, ದಿಗಂತ್ ಮತ್ತು ಪೂರ್ಣ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಲ್ಲಲ್ಲಿ ನಗಿಸುತ್ತಾ, ಹೆದರಿಸುತ್ತಾ ಸಾಗುವ “ಮ್ಯಾಟ್ನಿ’ ಸಂಭಾಷಣೆಯಿಂದಲೂ ಗಮನ ಸೆಳೆಯುತ್ತದೆ. ಎಲೆಕ್ಷನ್ ಬಿಜಿ, ಬೇಸಗೆಯ ಬಿಸಿಯ ನಡುವೆ ಐಪಿಎಲ್ ಕ್ರಿಕೆಟ್ನಿಂದ ಬ್ರೇಕ್ ಪಡೆಯಲಿಚ್ಛಿಸುವ ಥ್ರಿಲ್ಲರ್ ಸಿನಿಮಾಪ್ರಿಯರಿಗೆ “ಮ್ಯಾಟ್ನಿ’ ಉತ್ತಮ ಆಯ್ಕೆ.